ನವದೆಹಲಿ: ಚೀನಾ ವಿರುದ್ಧ ಜನಾಕ್ರೋಶದ ಹಿನ್ನೆಲೆಯಲ್ಲಿ ಚೀನಾ ಮೂಲದ ಮೊಬೈಲ್ ಕಂಪನಿ ವಿವೋ, ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಳಿಕ ಭಾರತೀಯ ಕಂಪನಿಗಳಿಂದ ಪೈಪೋಟಿ ಹೆಚ್ಚಾಗಿದೆ. ಈ ನಡುವೆ, ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯೂ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಪತಂಜಲಿ ಸಂಸ್ಥೆ, ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ಷರತ್ತು ಒಂದನ್ನು ವಿಧಿಸಿದೆ. ಅದೇನು ಗೊತ್ತೇ?
‘ಭಾರತದ ಯಾವುದೇ ಕಾರ್ಪೋರೇಟ್ ಕಂಪನಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಮುಂದೆ ಬಾರದಿದ್ದರೆ ಮಾತ್ರ ಪತಂಜಲಿ ಸಂಸ್ಥೆ ಬಿಡ್ ಸಲ್ಲಿಸಲಿದೆ’ ಎಂದು ಬಾಬಾ ರಾಮ್ದೇವ್ ಅವರು ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ತಿಳಿಸಿದ್ದಾರೆ. ಇದರಿಂದ ಪತಂಜಲಿ ಸಂಸ್ಥೆ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವುದು ಸ್ಪಷ್ಟವಾಗಿದೆ. ಯಾಕೆಂದರೆ ಈಗಾಗಲೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ದೇಶದ ಪ್ರತಿಷ್ಠಿತ ಟಾಟಾ ಗ್ರೂಪ್ ಮತ್ತು ಶೇ. 100 ಭಾರತೀಯ ಹೂಡಿಕೆ ಹೊಂದಿರುವ ಬೆಂಗಳೂರು ಮೂಲದ ಆನ್ಲೈನ್ ಶಿಕ್ಷಣ ಸಂಸ್ಥೆ ಅನ್ಅಕಾಡೆಮಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಿವೆ.
ಇದನ್ನೂ ಓದಿ: ಪತಂಜಲಿ ಐಪಿಎಲ್! ಟ್ವಿಟರ್ನಲ್ಲಿ ಭರ್ಜರಿ ಟ್ರೆಂಡಿಂಗ್, ಟ್ರೋಲ್!
‘ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಜತೆಗೆ ಚೀನಾ ಉತ್ಪನ್ನಗಳ ಕಂಪನಿ ಸಹಯೋಗ ಹೊಂದುವುದನ್ನು ಜನರು ಬಯಸಿಲ್ಲ. ಹೀಗಾಗಿ ಭಾರತೀಯ ಸಂಸ್ಥೆಯೇ ಪ್ರಾಯೋಜಕತ್ವ ವಹಿಸಬೇಕೆಂದು ಜನರು ಬಯಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಐಪಿಎಲ್ ಪ್ರಾಯೋಜಕತ್ವಕ್ಕೆ ಭಾರತದ ಯಾವುದೇ ಕಂಪನಿ ಬಿಡ್ ಸಲ್ಲಿಸದಿದ್ದರೆ ಮಾತ್ರ ನಾವು ಪ್ರಾಯೋಜಕತ್ವ ವಹಿಸಿಕೊಳ್ಳುವೆವು’ ಎಂದು ಬಾಬಾ ರಾಮ್ದೇವ್ ತಿಳಿಸಿದ್ದಾರೆ.