ಅಳವಂಡಿ: ದೇವಸ್ಥಾನ ನಿರ್ಮಾಣ, ದೇವರ ಮೂರ್ತಿಗಳ ನಿರ್ಮಾಣ ಹಾಗೂ ಶಿಲ್ಪಕಲೆಗೆ ಹೆಸರು ವಾಸಿ ವಿಶ್ವಕರ್ಮ ಸಮಾಜ ಎಂದು ಎಸ್ಡಿಎಮ್ಸಿ ಅಧ್ಯಕ್ಷ ನಾಗರಾಜ ಕಗ್ಗಲ್ಲ ತಿಳಿಸಿದರು.
ಇದನ್ನೂ ಓದಿ: ವಿಶ್ವಕರ್ಮರು ಕಾಯಕ ನಿಷ್ಠವಂತರು
ಸಮೀಪದ ಕವಲೂರು ಗ್ರಾಮದ ಶ್ರೀವಿಶ್ವಕರ್ಮ ಸೇವಾ ಸಮಿತಿ ಹಾಗೂ ಗ್ರಾಮಸ್ಥರಯಿಂದ ಶ್ರೀವಿಶ್ವಕರ್ಮರ ಜಯಂತಿ ಅಂಗವಾಗಿ ನಡೆದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಕಲ್ಲು, ಕಟ್ಟಿಗೆ, ಮಣ್ಣು, ಲೋಹ ಹೀಗೆ ಹತ್ತು ಹಲವು ವಸ್ತುಗಳಲ್ಲಿ ತಮ್ಮ ಕೌಶಲ್ಯದ ಮೂಲಕ ಶಿಲ್ಪಕಲೆಯನ್ನು ಅನಾವರಣ ಮಾಡುವ ವಿಶ್ವ ಕರ್ಮ ಸಮಾಜ ಜಗತ್ತಿಗೆ ಮಾದರಿ. ಜಗತ್ತು ಆಧುನಿಕತೆಯತ್ತ ಮುನ್ನೆಡೆಯುತ್ತಿದ್ದರು ಇಂದಿಗೂ ಕಲೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎಂದರು.
ತಳಿರು, ತೋರಣ, ಹಾಗೂ ಹೂಗಳಿಂದ ಅಲಂಕರಿಸಿದ ಟ್ರ್ಯಾಕ್ಟರನಲ್ಲಿ ಶ್ರೀವಿಶ್ವಕರ್ಮರ ಭಾವಚಿತ್ರವನ್ನಿರಿಸಿ ಮಹಿಳೆಯರು ಕಳಸ, ಕುಂಭ, ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದ ಶ್ರೀದ್ಯಾಮವ್ವ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಮರಳಿ ದೇವಸ್ಥಾನವನ್ನು ತಲುಪಿತು. ನಂತರ ಅನ್ನ ದಾಸೋಹ ಸೇವೆ ನಡೆಯಿತು.
ಪ್ರಮುಖರಾದ ಮುತ್ತಣ್ಣ ಬಿಸರಳ್ಳಿ, ಮಾನಪ್ಪ ಕಮ್ಮಾರ, ಗಣೇಶ ಬಡಿಗೇರ, ಗೋಪಾಲ ಬಡಿಗೇರ, ಮೌನೇಶ ಬಡಿಗೇರ,
ಮುತ್ತಯ್ಯ ಲಿಂಬಿಕಾಯಿಮಠ, ಮುತ್ತಣ್ಣ ಬಡಿಗೇರ, ದ್ಯಾಮಣ್ಣ ಬಡಿಗೇರ, ವಾಸಪ್ಪ ಬಡಿಗೇರ, ದೇವಪ್ಪ ಬಡಿಗೇರ, ನಾಗರಾಜ,
ದ್ಯಾಮಣ್ಣ ಹಾಗೂ ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು.