ಮಹಾರಾಷ್ಟ್ರದಲ್ಲಿ ಕರೆಂಟ್ ಬಿಲ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆ ರಾಜ್ಯದ ಜನರಿಗೆ ಕಳೆದ ತಿಂಗಳ ಬಿಲ್ನಲ್ಲಿ ವಿಪರೀತ ಹೆಚ್ಚಳವಾಗಿದ್ದು, ಈ ಕುರಿತು ಸಾಕಷ್ಟು ಗಲಾಟೆಗಳಾಗುತ್ತಿವೆ. ಈಗ ನಟ ಅರ್ಷದ್ ವಾರ್ಸಿಗೂ ಈ ಕರೆಂಟ್ ಬಿಲ್ನ ಬಿಸಿ ತಟ್ಟಿದೆ.
ಇದನ್ನೂ ಓದಿ: ಸುಶಾಂತ್ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್ ಠಾಕ್ರೆ
ಅರ್ಷದ್ಗೆ ಜೂನ್ ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕರೆಂಟ್ ಬಿಲ್ ಬಂದಿದ್ದು, ಅದನ್ನು ನೋಡಿ ಅಕ್ಷರಶಃ ಅವರು ಕಂಗಾಗಲಾಗಿದ್ದಾರೆ. ಈ ಮೊತ್ತವನ್ನು ಅವರಿಂದ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದೇನಲ್ಲ. ಆದರೂ ಈ ಬಗ್ಗೆ ಗಮನ ಸೆಳೆಯುವುದಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜಾಗೃತಿ ಮೂಡಿಸುವುದಕ್ಕೆ ಅವರೊಂದು ಟ್ವೀಟ್ ಮಾಡಿದ್ದಾರೆ.
ನಟನೆಯ ಜತೆಗೆ ಒಳ್ಳೆಯ ಪೇಂಟರ್ ಕೂಡಾ ಆಗಿರುವ ಅವರು, ಹಲವು ವರ್ಷಗಳಿಂದ ಹಲವು ಪೇಂಟಿಂಗ್ಗಳನ್ನು ಮಾಡಿಟ್ಟುಕೊಂಡಿದ್ದಾರೆ. ಈಗಾಗಲೇ ಒಂದು ಪ್ರದರ್ಶನ ಸಹ ಏಪರ್ಡಿಸಿದ್ದಾರೆ. ಈಗ ಅದನ್ನೇ ಬಳಸಿಕೊಂಡಿರುವ ಅವರು, ‘ಯಾರಾದರೂ ದುಡ್ಡು ಕೊಟ್ಟು ನನ್ನ ಪೇಂಟಿಂಗ್ ಖರೀದಿಸಿದರೆ, ಬಂದ ದುಡ್ಡಿನಿಂದ ನನಗೆ ಕರೆಂಟ್ ಬಿಲ್ ಆದರೂ ಕಟ್ಟಿದಂತಾಗುತ್ತದೆ’ ಎಂದು ವಿಡಂಬನೆ ಮಾಡಿದ್ದಾರೆ.
ಅರ್ಷದ್ ಅವರ ಈ ವಿಡಂಬನೆ, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ತರಹದ ಟ್ವೀಟ್ ಮೂಲಕ ಅರ್ಷದ್, ಕರೆಂಟ್ ಕಂಪನಿಯವರ ಕಾಲೆಳೆಯುತ್ತಿರುವುದ ಬಗ್ಗೆ ಅವರ ಅಭಿಮಾನಿಗಳು ನಗುತ್ತಿದ್ದಾರೆ. ಅಷ್ಟೇ ಅಲ್ಲ, ಇದೇ ನೆಪದಲ್ಲಿ ಕೆಲವರು ಅರ್ಷದ್ ಅವರ ಕಾಲನ್ನೂ ಎಳೆದಿದ್ದಾರೆ. ‘ನೀವೇನೋ ಪೇಂಟಿಂಗ್ ಮಾರಿ, ಅದರಲ್ಲಿ ಬಂದ ದುಡ್ಡನಲ್ಲಿ ಕರೆಂಟ್ ಬಿಲ್ ಕಟ್ಟಬಹುದು. ಆದರೆ, ನಮಗೆ ನಿಮ್ಮ ಪೇಂಟಿಂಗ್ ಖರೀದಿಸುವುದಕ್ಕೆ ಒಂದು ಕಿಡ್ನಿಯನ್ನೇ ಮಾರಬೇಕಾಗಬಹುದೇನೋ’ ಎಂದು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಕೊನೇ ಚಿತ್ರಕ್ಕೆ ಬಿಡುಗಡೆ ಡೇಟ್ ಫಿಕ್ಸ್..
ಈ ಸಮಸ್ಯೆ ಬರೀ ಅರ್ಷದ್ ಅವರದ್ದು ಮಾತ್ರವಲ್ಲ. ತಾಪ್ಸಿ ಪನ್ನು, ಸೋಹಾ ಅಲೀ ಖಾನ್, ನೇಹಾ ದುಪಿಯಾ, ವೀರ್ ದಾಸ್, ರೇಣುಕಾ ಶಹಾನೆ ಸೇರದಿಂತೆ ಹಲವು ಸೆಲೆಬ್ರಿಟಿಗಳು ಇದೇ ತರಹದ ಸಮಸ್ಯೆಯನ್ನು ಎದುರಿಸಿದ್ದು, ಸೋಷಿಯಲ್ ಮೀಡಿಯಾ ಮೂಲಕ ಈ ದರ ಹೆಚ್ಚಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.