ಜೈಪುರ: ವಿಚಾರ ಒಂದಕ್ಕೆ ಅಣ್ಣ-ತಮ್ಮನ ನಡುವೆ ಶುರುವಾದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಭಾರತೀಯ ಸೇನೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಧೀರ್ ಸಿಂಗ್(43) ತನ್ನ ಸಹೋದರ ಹೀರಾ ಸಿಂಗ್(40)ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪ್ರಕರಣದ ಹಿನ್ನಲೆ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಭೂಪೇಂದ್ರ ಸಿಂಗ್ ಜೈಪುರದ ಬಿಂದಯಾಕ ಪ್ರದೇಶದ ನಿವಾಸಿಗಳಾದ ಧೀರ್ ಸಿಂಗ್ ಹಾಗೂ ಆತನ ಹೀರಾ ಸಿಂಗ್ ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಧೀರ್ ಸಿಂಗ್ ತನ್ನ ಬಳಿ ಇದ್ದ ಗನ್ನಿಂದ ಸಹೋದರನ ಭುಜಕ್ಕೆ ಗುಂಡು ಹಾರಿಸಿದ್ದಾನೆ.
ಇದನ್ನೂ ಓದಿ: VIDEO| ವಿವಾಹಿತನಿಗಾಗಿ ಹೊಡೆದಾಡಿಕೊಂಡ ಮಹಿಳೆಯರು
ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಹೀರಾ ಸಿಂಗ್ ಮೃತಪಟ್ಟಿದ್ದಾರೆ. ಪ್ರಕರಣ ಆರೋಪಿ ಧೀರ್ ಸಿಂಗ್ ವಿರುದ್ಧ ಭಾರತ ದಂಡ ಸಂಹಿತೆ(IPC Section) 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ.
ಆರೋಪಿಯಿಂದ 12 ಬೋರ್ ಪರವಾನಗಿ ಪಡೆದ ರೈಫಲ್ ಮತ್ತು ಎರಡು ಶೆಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.