ಜಿಲ್ಲಾ ಶ್ರೀರಾಮ ಸೇನೆ ಕರ್ನಾಟಕ ಆಗ್ರಹ | ಉಪನೋಂದಣಾಧಿಕಾರಿಗೆ ಮನವಿ
ವಿಜಯವಾಣಿ ಸುದ್ದಿಜಾಲ ಉಡುಪಿ
ಅಂತರ್ ಧರ್ಮೀಯ ವಿವಾಹ ನೋಂದಣಿ ಸಂದರ್ಭದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಕರ್ನಾಟಕದ ಉಡುಪಿ ಜಿಲ್ಲಾ ಘಟಕವು ಹಿರಿಯ ಉಪನೋಂದಣಾಧಿಕಾರಿ ಫಣೀಂದ್ರ ಎಚ್.ಕೆ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ವಿವಾಹ ನೋಂದಣಿ ಮಾಡುವ 20 ದಿನ ಮೊದಲು ವಿವಾಹ ಆಗುವವರ ಸಂಪೂರ್ಣ ಮಾಹಿತಿಯನ್ನು ಕಚೇರಿಯ ನೋಟಿಸ್ ಬೋರ್ಡ್ಗೆ ಹಾಕುವ ಮೂಲಕ ಸಮಾಜದಲ್ಲಿ ಮುಂದೆ ಘಟಿಸುವ ಅನಾಹುತ ತಪ್ಪಿಸಬೇಕು ಎಂದು ವಿನಂತಿಸಿದರು.
ಕಾನೂನು ಉಲ್ಲಂಘನೆ
ಮನವಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಮಾತನಾಡಿ, ಇತ್ತೀಚೆಗೆ ಅಂತರ್ ಧರ್ಮೀಯ ವಿವಾಹವು ಕೋಮು ಸ್ವರೂಪ ಪಡೆಯುತ್ತಿದೆ. ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವಂತಹ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲಿಸದೆ, ವಿವಾಹವಾಗುವವರ ಮಾಹಿತಿಯ ಪ್ರತಿಯನ್ನೂ ಕಚೇರಿಯ ನೋಟಿಸ್ ಬೋರ್ಡ್ಗೆ ಲಗತ್ತಿಸದೆ ವಿವಾಹ ಮಾಡುತ್ತಿದ್ದಾರೆ. ಇದು ಮತಾಂತರ ತಡೆ ಕಾಯ್ದೆ -2022ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ನೂರಾರು ಹತ್ಯೆ
ಲವ್ ಜಿಹಾದ್ ವಿರೋಧಿಸಿ ರಾಜ್ಯದಲ್ಲಿ 2009ರಲ್ಲಿ ಪ್ರಥಮ ಬಾರಿಗೆ ಶ್ರೀರಾಮ ಸೇನೆ ಧ್ವನಿ ಎತ್ತಿತು. ಒಂದಿಷ್ಟು ಲವ್ ಜಿಹಾದ್ ಪ್ರಕರಣ ತಡೆದು ಕೆಲ ಕುಟುಂಬ ನೆಮ್ಮದಿಯಿಂದ ಇರುವಂತೆ ಮಾಡಿದ್ದೇವೆ. 2023ರಲ್ಲಿ ರಾಜ್ಯದಲ್ಲಿ 53 ಲವ್ ಜಿಹಾದ್ ಹತ್ಯೆ ನಡೆದಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಹೀಗಾಗಿ ವಿವಾಹ ನೋಂದಣಿ ಕಚೇರಿಗಳಲ್ಲಿ ಕಾನೂನು ಪಾಲನೆ ಆಗಲೇಬೇಕಿದೆ ಎಂದು ಒತ್ತಾಯಿಸಿದರು.
ಜಿಲ್ಲಾ ವಕ್ತಾರ ಶರತ್ ಪೂಜಾರಿ, ಪ್ರ.ಕಾರ್ಯದರ್ಶಿ ಸುದರ್ಶನ ಕಪ್ಪೆಟ್ಟು, ಜಿಲ್ಲಾ ಕಾರ್ಯದರ್ಶಿ ವಿಕ್ರಂ ವಿ., ಸಂಪರ್ಕ ಪ್ರಮುಖ್ ಸುಜಿತ್ ನಿಟ್ಟೂರು, ನಗರ ಅಧ್ಯಕ್ಷ ಸುದೀಪ್ ನಿಟ್ಟೂರು ಉಪಸ್ಥಿತರಿದ್ದರು.
24×7 ಸಹಾಯವಾಣಿ ಆರಂಭ
ಲವ್ ಜಿಹಾದ್ ನಿಯಂತ್ರಣಕ್ಕಾಗಿ ಶ್ರೀರಾಮ ಸೇನೆ ವತಿಯಿಂದ ಮೇ 29ರಂದು ಟೋಲ್ ಫ್ರೀ ಸಹಾಯವಾಣಿ ಆರಂಭಿಸಲಾಗುತ್ತಿದೆ. ಹುಬ್ಬಳ್ಳಿಯನ್ನು ಕೇಂದ್ರ ಘಟಕವನ್ನಾಗಿಸಿಕೊಂಡು ಬೆಂಗಳೂರು, ದಾವಣಗೆರೆ, ಮಂಗಳೂರು, ಗುಲ್ಬರ್ಗಾ ಮತ್ತು ಯಾದಗಿರಿಯಲ್ಲಿ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದು ಜಯರಾಮ್ ಅಂಬೆಕಲ್ಲು ಮಾಹಿತಿ ನೀಡಿದರು.