ಬೆಂಗಳೂರು: ಎಪಿಎಂಸಿ ಕಾಯ್ದೆ ಕೈಬಿಡುವ ಮೂಲಕ ಸರ್ಕಾರ ತಾನು ರೈತರ ಪರ ಎಂಬುದನ್ನು ತೋರಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು ತಿದ್ದುಪಡಿ ತಂದರೆ ಆಗಬಹುದಾದ ತೊಂದರೆಗಳ ಬಗ್ಗೆ ವಿವರಿಸಿದರು.
ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಮಾರುಕಟ್ಟೆ ಪ್ರವೇಶಿಸಿದರೆ ಸರ್ಕಾರದ ಹಿಡಿತ ಇಲ್ಲದಂತೆ ಆಗುತ್ತದೆ. ಕೃಷಿ ಉತ್ಪನ್ನಗಳಿಗೆ ದರ ನಿಗದಿ ಸೇರಿ ಯಾವುದೇ ಕ್ರಮ ಕೈಗೊಳ್ಳಲು ಅವಕಾಶ ಇರುವುದಿಲ್ಲ. ಕೇಂದ್ರದ ಒತ್ತಡಕ್ಕೆ ಮಣಿಯಬೇಡಿ. ತಿದ್ದುಪಡಿಯಿಂದ ರೈತರಿಗೆ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ. ಹೀಗಾಗಿ ನಿರ್ಧಾರ ಮರುಪರಿಶೀಲಿಸಿ ಎಂದು ಸಲಹೆ ನೀಡಿದರು.
ಸರ್ಕಾರ ಹೇಳುವ ಅನುಕೂಲ
ಸರ್ಕಾರ ಹೇಳುವ ಅನುಕೂಲ ಸ್ಪರ್ಧೆ ಹೆಚ್ಚಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ
ಎಪಿಎಂಸಿಗಳಲ್ಲಿ ದಾಸ್ತಾನು ಇಟ್ಟರೆ ಸಾಲಕ್ಕೆ ಬ್ಯಾಂಕ್ ಗ್ಯಾರಂಟಿ ನೀಡುವ ಅವಕಾಶ
ಇಲಾಖೆ ಮತ್ತು ಮಾರುಕಟ್ಟೆ ಪ್ರತ್ಯೇಕ ಮಾಡಲಾಗುತ್ತದೆ
ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಇಲ್ಲದೆ ಬಹುಸ್ವಾಮ್ಯತೆ ಬರುತ್ತದೆ
ಖರೀದಿದಾರರು ಹಾಗೂ ರೈತರ ನಡುವೆ ವಿವಾದ ಬಗೆಹರಿಸಲು ಕಾನೂನು
ಇದನ್ನೂ ಓದಿ ಟಿಡಿಎಸ್ ಕಡಿತ ಯಾರಿಗೆ? ಎಂಎಸ್ಎಂಇಗಳಿಗೇಕೆ ಅಷ್ಟು ಹಣ ಮೀಸಲು?-ತಜ್ಞರ ಉತ್ತರ…
ಅನಾನುಕೂಲಗಳು
ಖಾಸಗಿ ಕಂಪನಿಗಳು ನಿಗದಿ ಮಾಡಿದ್ದೇ ದರ
ನಿಗದಿತ ಬೆಲೆಯ ಖಾತ್ರಿ ಇಲ್ಲ
ಕಂಪನಿಗಳ ಕಡೆಯಿಂದ ಮಧ್ಯವರ್ತಿಗಳು ಹೆಚ್ಚಾಗುವ ಅಪಾಯ
ರೈತರಿಗೆ ಸಾಲ ಕೊಟ್ಟವರು ಬೇಕಾಬಿಟ್ಟಿ ದರಕ್ಕೆ ಖರೀದಿಸುವ ಅಥವಾ ಪೂರ್ತಿ ಬೆಳೆ ಕಬಳಿಸುವ ಸಾಧ್ಯತೆ
ಯಾವುದೇ ಅಧಿಸೂಚಿತ ಉತ್ಪನ್ನಕ್ಕೂ ದರ ನಿಗದಿಯಾಗದಿರುವ ಸಾಧ್ಯತೆ
ಎಪಿಎಂಪಿಗಳ ಲಕ್ಷಾಂತರ ಕೋಟಿ ರೂ.ಗಳ ಆಸ್ತಿ ಕಬಳಿಸುವ ಅಪಾಯ
ಕಂಪನಿ ಕೃಷಿಗೆ ಕೆಂಪುಹಾಸು ಹಾಕುವ ಹುನ್ನಾರ
ಎಪಿಎಂಸಿಗಳ ಅಸ್ತಿ್ತ್ವ ಇರುವುದಿಲ್ಲ, ಸಮಿತಿಗಳಿಗೆ ಕೆಲಸ ಇಲ್ಲದಂತಾಗುತ್ತದೆ
ಹರಾಜು ಇಲ್ಲದೆ ಮನೆ ಅಥವಾ ಹೊಲದಲ್ಲಿ ಖರೀದಿಯಾದರೆ ಎಪಿಎಂಸಿಗಳಲ್ಲೂ ಬೆಲೆ ಇರುವುದಿಲ್ಲ
ಬಿಳಿ ಚೀಟಿ ವ್ಯವಹಾರ ಹೆಚ್ಚಾಗಿ ರೈತರಿಗೆ ಧೋಖಾ ಆಗಬಹುದು
ಬೇಕಾಬಿಟ್ಟಿ ಖರೀದಿಯಾದರೆ ಜಿಎಸ್ಟಿ ಸಂಗ್ರಹದ ಮೇಲೂ ಪರಿಣಾಮ
ಎಪಿಎಂಸಿ ಸಮಿತಿಗಳಲ್ಲಿ ಇರುವ ಟ್ರೇಡರ್, ಹಮಾಲಿಗಳಿಗೂ ತೊಂದರೆ
ಕಳ್ಳದಂಧೆ ಮತ್ತೆ ಆರಂಭವಾಗುವ ಸಾಧ್ಯತೆ
ಖರೀದಿ, ಬೆಲೆ ಇವುಗಳ ಮೇಲೆ ಯಾವುದೇ ಉಸ್ತುವಾರಿ ಇರುವುದಿಲ್ಲ
ಮಾರುಕಟ್ಟೆ ಇಲ್ಲದಿದ್ದರೆ ಅದಕ್ಕೆ ಉತ್ತರದಾಯಿ ಯಾರು ಎಂಬ ಪ್ರಶ್ನೆ