ಮುಂಬೈ: ವಿವಾದದ ಹೊರತಾಗಿಯೂ ರಣಬೀರ್ ಕಪೂರ್ ಅಭಿನಯದ “ಅನಿಮಲ್” ಸಿನಿಮಾ 500 ಕೋಟಿ ರೂ.ಗೂ ಅಧಿಕ ಗಳಿಕೆಯೊಂದಿಗೆ ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಬಗ್ಗೆ ಸಿನಿ ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಮಾತನಾಡಿದ್ದಾರೆ. ಚಿತ್ರಮಂದಿರದೊಳಗೆ ಮಾತ್ರವಲ್ಲ, ಸಂಸತ್ತಿನ ಒಳಗೂ ಅನಿಮಲ್ ಸಿನಿಮಾ ಸದ್ದು ಮಾಡಿದೆ. ಹಿಂಸೆಯನ್ನೇ ವೈಭವೀಕರಿಸುವ ಸಿನಿಮಾ ವಿರುದ್ಧ ಸಾಕಷ್ಟು ಆಕ್ರೋಶಗಳು ಕೂಡ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಹಿಂಸೆ ಮಾತ್ರವಲ್ಲದೆ ಮಹಿಳೆಯರನ್ನು ಸಹ ತುಂಬಾ ಕೀಳಾಗಿ ಚಿತ್ರೀಕರಿಸಲಾಗಿದೆ ಎಂಬ ಆರೋಪವೂ ಇದೆ.
ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸಿನಿಮಾಗಳೇ ಹಾಗೇ. ಅವರ ಚಿತ್ರದಲ್ಲಿ ಪುರುಷ ಪಾತ್ರಗಳನ್ನು ಅತ್ಯುನ್ನತ ಎಂಬಂತೆ ಬಿಂಬಿಸುತ್ತಾರೆ ಎಂಬ ಆರೋಪವಿದೆ. ಈ ಹಿಂದೆ ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾ ಬಿಡಗಡೆ ಬಳಿಕವೂ ಇದೇ ಆರೋಪ ಕೇಳಿಬಂದಿತ್ತು. ನಟಿ ಅನಸೂಯಾ ಭಾರಧ್ವಜ್ ಅವರು ಓಪನ್ ಆಗಿಯೇ ಸಿನಿಮಾವನ್ನು ತೆಗಳಿದ್ದರು. ಇಂದಿಗೂ ಅನಸೂಯ ಮತ್ತು ವಿಜಯ್ ದೇವರಕೊಂಡ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಇದೇ ಅರ್ಜುನ್ ರೆಡ್ಡಿ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್ ಸಿಂಗ್ ಹೆಸರಿನಲ್ಲಿ ರಿಮೇಕ್ ಮಾಡಿ ಬಿಡುಗಡೆ ಮಾಡಿದಾಗಲೂ ಇದೇ ಮಾತುಗಳು ಕೇಳಿಬಂದಿದ್ದವು. ಕಬೀರ್ ಸಿಂಗ್ ಸಿನಿಮಾದಲ್ಲಿ ನಟ ಶಾಹೀದ್ ಕಪೂರ್ ಹೀರೋ ಆಗಿ ನಟಿಸಿದ್ದರು.
ಇದೀಗ ಅನಿಮಲ್ ಸಿನಿಮಾ ಕುರಿತು ಟೀಕೆಗಳು ವ್ಯಕ್ತವಾಗಿವೆ. ಮಹಿಳೆಯರನ್ನು ಚಿತ್ರಿಸಿರುವ ರೀತಿ ಸರಿಯಲ್ಲ ಮತ್ತು ನಗ್ನತೆ ಹಾಗೂ ಅಸಭ್ಯತೆಯೇ ಪ್ರಧಾನವಾಗಿದೆ ಎಂದು ಸಾಕಷ್ಟು ಖಂಡನೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ನಿರ್ದೇಶಕ ಸಂದೀಪ್ ರೆಡ್ಡಿಯ ಹಳೆಯ ಸಂದರ್ಶನದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ ಸಂದೀಪ್ ರೆಡ್ಡಿ ಪತ್ನಿಯ ಜತೆಗಿನ ವೈವಾಹಿಕ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಕಬೀರ್ ಸಿಂಗ್ ಸಿನಿಮಾ ಬಿಡುಗಡೆ ಸಮಯದಲ್ಲಿ ಈ ಸಂದರ್ಶನವನ್ನು ನೀಡಲಾಗಿತ್ತು. ಇದೀಗ ಅದರ ಸಣ್ಣ ತುಣುಕೊಂಡು ವೈರಲ್ ಆಗಿದ್ದು, ಅದರಲ್ಲಿ ಸಂದೀಪ್ ಏನು ಹೇಳಿದ್ದಾರೆ ಅನ್ನೋದನ್ನು ನಾವೀಗ ತಿಳಿಯೋಣ.
ಪತ್ನಿ ಮತ್ತು ಭಾವನೆ
ವಿಡಿಯೋದಲ್ಲಿ ಮಹಿಳೆಯ ಮೇಲಿನ ಹಿಂಸೆಗೆ ಸಂದೀಪ್ ರೆಡ್ಡಿ ಸಮರ್ಥನೆ ನೀಡಿದ್ದಾರೆ. ಸಂಬಂಧಗಳಲ್ಲಿ ಇರುವ ಭಾವನೆಗಳ ಬಗ್ಗೆ ತಮ್ಮದೇಯಾದ ವ್ಯಾಖ್ಯಾನವನ್ನು ನೀಡಿರುವ ಸಂದೀಪ್, ನೀವು ನಿಮ್ಮ ಪತ್ನಿಯ ಕಪಾಳಕ್ಕೆ ಹೊಡೆಯದಿದ್ದರೆ, ನೀವು ಎಲ್ಲಿ ಬೇಕು ಅಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು ಸಾಧ್ಯವಾಗದಿದ್ದರೆ, ನೀವು ಮುತ್ತು ಕೊಡಲು ಸಾಧ್ಯವಾಗದಿದ್ದರೆ ಮತ್ತು ಪತ್ನಿಯನ್ನು ಬೈಯ್ಯದಿದ್ದರೆ ಆ ಸಂಬಂಧದಲ್ಲಿ ನಾನು ಭಾವನೆಗಳನ್ನೇ ಕಾಣುವುದಿಲ್ಲ ಎಂದಿದ್ದಾರೆ.
ಅನಿಮಲ್ ಸಿನಿಮಾ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ತುಣುಕು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಸಾಕಷ್ಟು ಮಂದಿ ಸಂದೀಪ್ ಅವರನ್ನು ಟೀಕಿಸುತ್ತಿದ್ದಾರೆ. ಅವರ ಪತ್ನಿಯನ್ನು ದೇವರೇ ಕಾಪಾಡಬೇಕು. ಅವರ ಪತ್ನಿಗಾಗಿ ಎಲ್ಲರು ಪ್ರಾರ್ಥಿಸಿ, ಕೌಟುಂಬಿಕ ಹಿಂಸೆಯನ್ನು ಪ್ರೀತಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಕಪಾಳಮೋಕ್ಷವನ್ನು ಸಮರ್ಥಿಸುತ್ತಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸಂಸದೆ ಧ್ವನಿ
ಇತ್ತೀಚೆಗೆ ಚಳಿಗಾಲ ಅಧಿವೇಶನದ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ಅನಿಮಲ್ ಸಿನಿಮಾ ವಿರುದ್ಧ ಸದನದಲ್ಲೇ ವಾಗ್ದಾಳಿ ನಡೆಸಿದರು. ತಮ್ಮ ಮಗಳು ಸಿನಿಮಾದಿಂದ ಅರ್ಧಕ್ಕೆ ಎದ್ದು ಹೊರಬಂದಿದ್ದಾಗಿ ತಿಳಿಸಿದರು. ಇಡೀ ಸಿನಿಮಾದಲ್ಲಿ ಹಿಂಸೆ, ನಗ್ನತೆ, ಅಸಭ್ಯತೆಯೇ ಪ್ರಧಾನವಾಗಿದೆ ಎಂದು ದೂರಿದರು ಮತ್ತು ಕ್ರಮಕ್ಕೂ ಆಗ್ರಹಿಸಿದರು.
ಹಿಂಸೆಯೇ ಪ್ರಧಾನ
ಕಬಿರ್ ಸಿಂಗ್, ಪುಷ್ಪ, ಕೆಜಿಎಫ್ 2 ಸೇರಿದಂತೆ ಇತ್ತೀಚಿನ ಸಿನಿಮಾಗಳಲ್ಲಿ ಹಿಂಸೆಯನ್ನೇ ಕೇಂದ್ರಿಕರಿಸಲಾಗಿದೆ. ಕೆಲ ಸಿನಿಮಾಗಳಲ್ಲಿ ನಗ್ನತೆಯು ಇದೆ. ಯುವಕರನ್ನು ತಪ್ಪು ದಾರಿಗೆ ಎಳೆಯುವ ಸನ್ನಿವೇಶಗಳೇ ಚಿತ್ರದ ಪ್ರಧಾನ ಕತೆಯಾಗಿದೆ. ಕೆಜಿಎಫ್-2 ಸಿನಿಮಾ ನೋಡಿ ಅದೇ ಮಾದರಿಯಲ್ಲಿ ಮಧ್ಯಪ್ರದೇಶದ ಯುವಕನೊಬ್ಬ ಸುತ್ತಿಗೆಯಿಂದ ನಾಲ್ವರನ್ನು ಕೊಂದಿರುವ ಉದಾಹರಣೆ ಇದೆ. ಪುಷ್ಪ ಸಿನಿಮಾದಿಂದ ಸ್ಫೂರ್ತಿಗೊಂಡು ಅದೇ ಮಾದರಿಯಲ್ಲಿ ರಕ್ತಚಂದನ ಸಾಗಾಣೆಯಲ್ಲಿ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಕೆಜಿಎಫ್ ಸಿನಿಮಾದಲ್ಲಿ ನಟ ಯಶ್ ಸಿಗರೇಟ್ ಸೇದುವ ಶೈಲಿಯಿಂದ ಪ್ರಭಾವಿತನಾದ ಹುಡುಗನೊಬ್ಬ ಒಂದು ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆಗೆ ಸೇರಿದ್ದ. ಸಮಾಜದಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿರುವ ಸಿನಿಮಾಗಳಿಗೆ ಕಡಿವಾಣ ಬೀಳಬೇಕಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಸದನದಲ್ಲೇ ಸಂಸದೆಯೊಬ್ಬರು ಧ್ವನಿ ಎತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಹಿಂಸೆಯನ್ನು ವೈಭವೀಕರಿಸುವ ಸಿನಿಮಾಗಳಲ್ಲಿ ಕಡಿವಾಣ ಬೀಳುವ ಭರವಸೆ ಇದೆ. ರಂಜೀತ್ ರಂಜನ್ರಂತೆ ಅನೇಕ ಧ್ವನಿ ಎತ್ತಿದರೆ ಇಂತಹ ಚಿತ್ರಗಳಿಗೆ ಕಡಿವಾಣ ಗ್ಯಾರೆಂಟಿ ಬೀಳಲಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಡಿಸೆಂಬರ್ 1ರಂದು ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 500 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್ ಸಿನಿಮಾ ಕಮಾಲ್ ಮಾಡುತ್ತಿದೆ. (ಏಜೆನ್ಸೀಸ್)
ಅನಿಮಲ್ ಸಿನಿಮಾ ವಿವಾದ: ಹಿಂಸೆಯನ್ನೇ ವೈಭವೀಕರಿಸುವ ಚಿತ್ರಗಳಿಗೆ ಬೀಳಲಿದೆಯಾ ಕಡಿವಾಣ?