ಆನೇಕಲ್: ಹಾವನ್ನ ಕಂಡರೆ ಮನುಷ್ಯರು, ಮನುಷ್ಯರನ್ನು ಕಂಡರೆ ಹಾವು ಓಡುವುದು ಸಾಮಾನ್ಯ. ಆದರೆ ಇಲ್ಲೊಂದು ನಾಗರಹಾವು ಒಂದೂವರೆ ತಿಂಗಳಿನಿಂದ ಜನನಿಬಿಡ ಸ್ಥಳದಲ್ಲಿರುವ ಗಿಡವೊಂದರಲ್ಲಿ ನಿತ್ಯ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಪಟ್ಟಣದ ನಾರಾಯಣಪುರ ಸಮೀಪದ ಚಿಕ್ಕಕೆರೆ ಪಕ್ಕದಲ್ಲಿರುವ ಗಿಡದ ರಂಬೆಯೊಂದರ ಮೇಲೆ ನಿತ್ಯವೂ ಕಾಣಿಸಿಕೊಳ್ಳುತ್ತಿದೆ. ಈ ವಿಷಯ ಬಾಯಿಂದ ಬಾಯಿಗೆ ಹರಡಿದ್ದು, ಇದನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಸಂಜೆಯವರೆಗೆ ಮರದ ರೆಂಬೆ ಮೇಲಿದ್ದು 5 ಗಂಟೆಗೆ ವಾಪಸ್ ಹೋಗುತ್ತಿದೆ. ಹಾವಿನ ಈ ವರ್ತನೆಯಿಂದ ಕುತೂಹಲಗೊಂಡಿರುವ ಸಾರ್ವಜನಿಕರಲ್ಲಿ ಕೆಲವರು ಪೂಜೆ ಪುನಸ್ಕಾರ ಆರಂಭಿಸಿದ್ದಾರೆ. ಹಾವಿಗೆ ಹಾಲಿಟ್ಟು, ಆರತಿ ಎತ್ತಿ ಪೂಜೆ ಸಲ್ಲಿಸುತ್ತಿದ್ದಾರೆ.
ಸೃಷ್ಠಿಯಾಗಿವೆ ನಾನಾ ಕತೆಗಳು: ಹಾವಿನ ಈ ದಿನಚರಿಯಿಂದ ಸ್ಥಳೀಯವಾಗಿ ನಾನಾ ಕತೆಗಳು ಸೃಷ್ಠಿಯಾಗತೊಡಗಿವೆ. ಹಾವು ಕಾಣಿಸಿಕೊಳ್ಳುತ್ತಿರುವ ಗಿಡದ ಅಕ್ಕಪಕ್ಕದಲ್ಲಿ ಎರಡು ಅರಳಿ ಮರ ಹಾಗೂ ಎದುರುಗಡೆ ಆಶ್ರಮವಿದೆ. ಈ ಹಿಂದೆ ಈ ಸ್ಥಳದಲ್ಲಿ ನಾಗದೇವರಿಗೆ ಸಂಬಂಧಪಟ್ಟ ಗುಡಿ ಅಥವಾ ಹುತ್ತ ಇದ್ದಿರಬೇಕು? ಇದರಿಂದಾಗಿ ಪ್ರತಿದಿನ ನಾಗರಹಾವು ಇಲ್ಲಿಗೆ ಬರುತ್ತಿದೆ ಎಂದು ನಾರಾಯಣಪುರದ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹಾವು ಬಂದು ನೆಲೆಸುತ್ತಿರುವ ಜಾಗದಲ್ಲಿ ಸಣ್ಣದಾದ ಗುಡಿ ನಿರ್ಮಿಸಲು ಸ್ಥಳೀಯರು ಹಾಗೂ ಹಾವನ್ನು ನೋಡಲು ಬರುತ್ತಿರುವವರು ಸಿದ್ಧತೆ ನಡೆಸುತ್ತಿದ್ದಾರೆ.
ಗದ್ದಲಕ್ಕೂ ಭಯ ಪಡುತ್ತಿಲ್ಲ: ಜನರಿರುವ ಸ್ಥಳದಿಂದ ದೂರ ಹೋಗುವುದು ಹಾವುಗಳ ಸಾಮಾನ್ಯ ಸ್ವಭಾವ. ಆದರೆ ಈ ಹಾವು ಜನರ ಗದ್ದಲಕ್ಕೂ ಭಯಗೊಳ್ಳುತ್ತಿಲ್ಲ. ಪೂಜೆ ಸಲ್ಲಿಸಿದರೂ ನಿರಾತಂಕವಾಗಿಯೇ ಇರುತ್ತದೆ. ಇದು ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.
ಮಹಿಳೆಯರಿಂದ ಪೂಜೆ: ಪ್ರತಿದಿನ ಗಿಡದ ಬಳಿ ಬಂದು ಹಾವು ಮಲಗುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಹಾಗೂ ಮಹಿಳೆಯರು ಹಾಲು, ಅಗರಬತ್ತಿ, ಹೂವು ತಂದು ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ. ಇನ್ನೂ ಕೆಲ ಕಿಡಿಗೇಡಿಗಳು ಹಾವಿಗೆ ತೊಂದರೆ ಕೊಡುತ್ತಿದ್ದು, ಗ್ರಾಮಸ್ಥರು ಹಾವಿಗೆ ತೊಂದರೆ ನೀಡಿದ ಯುವಕರನ್ನು ಬೈದು ಕಳುಹಿಸುತ್ತಿರುವುದು ಸಾಮಾನ್ಯವಾಗಿದೆ.
ಪ್ರತಿದಿನ ಹಾವು ಮಲಗುತ್ತಿರುವ ಗಿಡ ಹರಳು (ಹರಳೆಣ್ಣೆ ಗಿಡ) ಗಿಡವಾಗಿದ್ದು, ಇದರ ಮೇಲೆ ಹಾವು ಬಿಸಿಲಿನ ಸಂದರ್ಭದಲ್ಲಿ ತಂಪಾಗಿರುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಬಂದು ಮಲಗುವ ಸಾಧ್ಯತೆಯಿರುತ್ತದೆ. ಜನನಿಬಿಡ ಪ್ರದೇಶದಲ್ಲಿ ತಿಂಗಳಿಗೂ ಹೆಚ್ಚು ಕಾಲದಿಂದ ಬರುತ್ತಿರುವುದನ್ನು ಗಮನಿಸಿದರೆ ಹುತ್ತವಿದ್ದು, ಅದಕ್ಕೆ ಏನಾದರೂ ಹಾನಿ ಮಾಡಿದರೆ ನಾಗರಹಾವು ಈ ರೀತಿ ಬರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
| ಸ್ನೇಕ್, ಸೂರಿ
ಬೆಂಗಳೂರು ಮೂಲದ ಪೊಲೀಸ್ ಸಿಬ್ಬಂದಿ-ಪತ್ರಕರ್ತೆ ದಂಪತಿ ಪುತ್ರ ಅಪಘಾತದಲ್ಲಿ ಸಾವು
ಶಿವಮೊಗ್ಗದ ಮನೆಯೊಂದರಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ಕ್ಷಣಾರ್ಧದಲ್ಲೇ ಘೋರ ದುರಂತ! ಇಡೀ ಮನೆಯಲ್ಲಿ ಸೂತಕ ಛಾಯೆ