ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಸ್ನೇಹಿತರೊಂದಿಗೆ ಕನಕಪುರದ ಕಬ್ಬಾಳಮ್ಮ ದೇವಿಯ ದರ್ಶನ ಪಡೆದು ತೆರಳುತ್ತಿದ್ದ ಬೆಂಗಳೂರಿನ ಯುವಕನೊಬ್ಬ ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ಚನ್ನಪಟ್ಟಣ ಸಮೀಪ ಹಕ್ಕೂರಿನಲ್ಲಿ ಸಂಭವಿಸಿದೆ.
ಪೊಲೀಸ್ ಸಿಬ್ಬಂದಿ ಅನಂತರಾಜು ಮತ್ತು ಪತ್ರಕರ್ತೆ ಸುನಿತಾ ದಂಪತಿಯ ದ್ವಿತೀಯ ಪುತ್ರ ರವಿಕಿರಣ್(20) ಮೃತ ದುರ್ದೈವಿ. ಬೆಂಗಳೂರಿನ ಶ್ರೀನಗರದಲ್ಲಿ ವಾಸವಿದ್ದ ರವಿಕಿರಣ್, ಇತ್ತೀಚಿಗಷ್ಟೇ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದ.
4 ತಿಂಗಳ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮಗನ ಆಸೆಯಂತೆ ಬರ್ತ್ಡೇ ದಿನದಂದು ತಾಯಿ ಹೊಸ ಬೈಕ್ ಕೊಡಿಸಿದ್ದರು. ನ್ಯೂ ಇಯರ್ ಬಂತು, ಇತ್ತ ವಿದ್ಯಾಭ್ಯಾಸವೂ ಮುಗೀತು. ಉದ್ಯೋಗಕ್ಕೆ ಸೇರಬೇಕು, ಹೊಸದಾಗಿ ಏನಾದರೂ ಶುರು ಮಾಡಬೇಕು ಎಂಬ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಭರವಸೆಯೊಂದಿಗೆ ಸ್ವಾಗತಿಸಲು ಸಜ್ಜಾಗಿದ್ದ ರವಿಕಿರಣ್, ಬೈಕ್ನಲ್ಲಿ ಕಬ್ಬಾಳಮ್ಮ ದೇಗುಲಕ್ಕೆ ಹೋಗಿದ್ದ. ಈತನ ಜತೆಗೆ ಸುಮಾರು 6 ಸ್ನೇಹಿತರು ತೆರಳಿದ್ದರು. ವಾಪಸ್ ಬರುವಾಗ ಮಾರ್ಗಮಧ್ಯೆ ಹಕ್ಕೂರಿನಲ್ಲಿ ರವಿಕಿರಣ್ ಬೈಕ್ ಅಪಘಾತಕ್ಕೀಡಾಗಿದ್ದು, ತಲೆಗೆ ಗಂಭೀರ ಪೆಟ್ಟಾಗಿತ್ತು.
ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಇಂದು ಸಂಜೆ ಚಾಮರಾಜಪೇಟೆಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಶಿವಮೊಗ್ಗದ ಮನೆಯೊಂದರಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ಕ್ಷಣಾರ್ಧದಲ್ಲೇ ಘೋರ ದುರಂತ! ಇಡೀ ಮನೆಯಲ್ಲಿ ಸೂತಕ ಛಾಯೆ