ಬೆಂಗಳೂರು: ಬಿಜೆಪಿ ಕರ್ನಾಟಕ ತನ್ನ ಎಕ್ಸ್ ಖಾತೆ ಹಾಗೂ ದಿನಪತ್ರಿಕೆಯಲ್ಲಿ ಜಾಹಿರಾತು ನೀಡಿ ಸುಳ್ಳು ಸುದ್ದಿ ಹಾಗೂ ದ್ವೇಷ ಹಬ್ಬಿಸುವ ಮೂಲಕ ಚುನಾವಣಾ ಕಾನೂನು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಸಾಮಾಜಿಕ ಕಾಳಜಿಯುಳ್ಳ ನಾಗರಿಕರು ಹಾಗೂ ನಾಗರಿಕ ಸಂಸ್ಥೆಗಳ ತಂಡ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬಿಜೆಪಿ ಕರ್ನಾಟಕ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಹಾಕಿದ ವಿಡಿಯೋದಲ್ಲಿ, ಕಾಂಗ್ರೆಸ್ ಪಕ್ಷ ಎಸ್ಸಿ/ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಪಾಲಿನ ಫಂಡ್ಸ್ ಅನ್ನು ಮುಸ್ಲಿಂ ಸಮುದಾಯಕ್ಕೆ ಮಾತ್ರ ನೀಡಿ ಈ ಸಮುದಾಯಗಳನ್ನು ಹೊರತಳ್ಳುವಂತೆ ಬಿಂಬಿಸಿದೆ. ಇಡೀ ವೀಡಿಯೊ ಮುಸ್ಲಿಂ ಸಮುದಾಯವನ್ನು ಕೆಟ್ಟದ್ದು ಹಾಗೂ ಇತರೆ ಇತರೆ ಸುಮುದಾಯಗಳಿಗೆ ಹಾನಿ ಮಾಡುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ.
ಪತ್ರಿಕಾ ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡುವಂತೆ ಹಾಗೂ ಎಸ್ಸಿ/ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿ ಕಿತ್ತುಹಾಕಲು ಸಂವಿಧಾನ ಬದಲಾಯಿಸಲು ಹೊರಟಿದೆ ಎಂದು ಹೇಳಲಾಗಿದೆ. ಇದು ಸಹ ಸುಳ್ಳು ಸುದ್ದಿಯಾಗಿದೆ.
ಮುಸ್ಲಿಂ ಸಮುದಾಯಕ್ಕೆ ದೇಶದಲ್ಲೇ ಎಲ್ಲೂ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿಲ್ಲ ಹಾಗೂ ನೀಡುವದಾಗಿ ಕಾಂಗ್ರೆಸ್ ಎಲ್ಲೂ ತಿಳಿಸಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಬಿಜೆಪಿ ಕರ್ನಾಟಕ, ಧರ್ಮವನ್ನು ಉಪಯೋಗಿಸಿ ಮತಗಳನ್ನು ಕೇಳಿ ಕಾನೂನು ಉಲ್ಲಂಸಿದೆ ಎಂದು ದೂರಿದೆ.
ದೂರು ಸ್ವೀಕರಿಸಿದ ಮುಖ್ಯ ಚುನಾವಣಾಧಿಕಾರಿ, ಈಗಾಗಲೇ ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಚುನಾವಣಾ ಆಯೋಗವು ಎಕ್ಸ್ ಖಾತೆಯಲ್ಲಿ ಬಿಜೆಪಿ ಹಾಕಿರುವ ವಿಡಿಯೋ ತೆಗೆಯಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ತಂಡದಲ್ಲಿ ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ ದ್ವೇಷದ ಮಾತಿನ ವಿರುದ್ಧ ಜನಾಂದೋಲನ, ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ಸ್ ಅಸೋಸಿಯೇಷನ್, ನಾವೆದ್ದು ನಿಲ್ಲದಿದ್ದರೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಎಸ್ ಮುಂತಾದ ಪ್ರಗತಿಪರ ಸಂಘಟನೆಗಳಿಂದ ಪ್ರತಿನಿಧಿಗಳಿದ್ದರು.
ದೂರಿನಲ್ಲಿರುವ ಆಗ್ರಹಗಳೇನು?
-ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಮತ್ತು ಬಿಜೆಪಿ ಕರ್ನಾಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇವರ ವಿರುದ್ಧ ಎಫ್ಐಆರ್ ದಾಖಲಿಸಬೇಕು.
-ಬಿಜೆಪಿ ಕರ್ನಾಟಕ ಎಕ್ಸ್ ಹ್ಯಾಂಡಲ್ ಎರಡು ದಿನ ಟ್ವೀಟ್ ಮಾಡದ ಹಾಗೆ ಆದೇಶಿಸಬೇಕು.
-ದ್ವೇಷ ಹರಡುವ ಮೇಲೆ ನಮೂದಿಸಿದ ಟ್ವೀಟ್ ಡಿಲಿಟ್ ಮಾಡಲು ಆದೇಶಿಸಬೇಕು.
-ಬಿಜೆಪಿಯ ಸ್ಟಾರ್ ಪ್ರಚಾರಕ ನರೇಂದ್ರ ಮೋದಿಗೆ ನೋಟಿಸ್ ಜಾರಿ ಮಾಡಬೇಕು.
-ಬಿಜೆಪಿ ಕರ್ನಾಟಕ ಪ್ರಕಟಿಸಿದ ತಪ್ಪು ಜಾಹಿರಾತಿಗೆ ಕ್ಷಮೆಯಾಚಿಸುವಂತೆ ಹಾಗೂ ಅದೇ ಸೈಜ್ ನ ಸ್ಪಷ್ಟಿಕರಣ ಪ್ರಕಟಿಸುವಂತೆ ಆದೇಶಿಸಬೇಕು.