| ಗೋಪಾಲಕೃಷ್ಣ ಪಾದೂರು ಉಡುಪಿ
ರಕ್ಷಣಾ ಇಲಾಖೆ ಅಧೀನದಲ್ಲಿರುವ ಡಿಆರ್ಡಿಒ ಸಂಸ್ಥೆ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ ಜೈವಿಕವಾಗಿ ಕೊಳೆಯುವ ಸಸ್ಯಜನ್ಯ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ (ಪಿಎಲ್ಎ) ಚೀಲಗಳ ಬಳಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪಿಎಲ್ಎ ಬಳಸಿ ತಯಾರಿಸಿದ ಕೈಚೀಲ, ದಿನಸಿ ಚೀಲಗಳಿಂದ ಪರಿಸರಕ್ಕೆ ಹಾನಿ ಇಲ್ಲ ಎನ್ನುವುದು ಇದಕ್ಕೆ ಕಾರಣವಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿ 2016ರಡಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ನಿಷೇಧಿಸಲಾಗಿದೆ. ಪಿಎಲ್ಎ ಚೀಲಗಳು ಮೇಲ್ನೋಟಕ್ಕೆ ಪ್ಲಾಸ್ಟಿಕ್ ಕವರ್ನಂತೆಯೇ ಕಾಣುವುದರಿಂದ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಈ ಚೀಲಗಳ ಮಾರಾಟಕ್ಕೂ ಅನುಮತಿ ನಿರಾಕರಿಸುತ್ತಿದ್ದಾರೆ. ಅಂಗಡಿಗಳಲ್ಲಿದ್ದರೆ ದಂಡವನ್ನೂ ಹಾಕುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಪರಿಸರ ಇಲಾಖೆ ಮುಂದಾಗಿದ್ದು, ನಿಯಮಾವಳಿಗಳಿಗೆ ಬದಲಾವಣೆ ತರಲು ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.
ಹಾಲಿನಂತಾಗುವ ಪಿಎಲ್ಎ ಚೀಲ: ಪಾಲಿ ಲ್ಯಾಕ್ಟಿಕ್ ಆಸಿಡ್ ಚೀಲ 6 ತಿಂಗಳು ಬಾಳಿಕೆ ಬರಲಿದೆ. ನಂತರ ಇದು ಇಟ್ಟಲ್ಲೇ ಕರಗುತ್ತದೆ. ಮೆಕ್ಕೆಜೋಳದ ಸಾರದಿಂದ ತಯಾರಿಸುವ ಈ ಕೈಚೀಲವನ್ನು ದನಗಳು ತಿಂದರೂ, ಸಮಸ್ಯೆಯಾಗುವುದಿಲ್ಲ. ಇದರಲ್ಲಿರುವ ಪೆಟ್ರೋ ಕೆಮಿಕಲ್ ದೇಹಕ್ಕೆ ಹಾನಿಕಾರಕ ಅಲ್ಲ. ಹೀಗಾಗಿ ಹೋಟೆಲ್ಗಳಲ್ಲಿ ಈ ಚೀಲಗಳಲ್ಲಿ ತಿಂಡಿ ಕಟ್ಟಿಕೊಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ. ಮಿಥಿಲೀನ್ ಡೈಕ್ಲೋರೈಡ್ ದ್ರಾವಣಕ್ಕೆ ಈ ಚೀಲಗಳನ್ನು ಹಾಕಿದರೆ 5 ನಿಮಿಷದಲ್ಲಿ ಹಾಲಿನಂತಾಗುತ್ತದೆ. ಇದೇ ದ್ರಾವಣಕ್ಕೆ ಪ್ಲಾಸ್ಟಿಕ್ ಚೀಲ ಹಾಕಿದರೆ ಕರಗದೆ ಉಳಿದುಕೊಳ್ಳುತ್ತದೆ. ಸಿಐಪಿಇಟಿ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ) ಪ್ರಯೋಗಾಲಯ ಈ ಕೈಚೀಲ ಜೈವಿಕವಾಗಿ ಕೊಳೆಯುತ್ತದೆ ಎಂದು ವರದಿ ನೀಡಿದೆ. ಆದ್ದರಿಂದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪಿಎಲ್ಎ ಚೀಲಗಳಿಗೆ ಅನುಮತಿ ನೀಡಿದೆ. ಈಗಾಗಲೇ ಗುಜರಾತ್ ಮತ್ತು ತೆಲಂಗಾಣದಲ್ಲಿ ಅನೇಕ ಉತ್ಪಾದಕರು ಡಿಆರ್ಡಿಒನಿಂದ ತಾಂತ್ರಿಕ ಅನುಮತಿ ಪಡೆದು ಪಿಎಲ್ಎ ಚೀಲಗಳನ್ನು ಉತ್ಪಾದಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಚೀಲಗಳ ಬಳಕೆ ಬಗ್ಗೆ ಪ್ರಚಾರ ಇಲ್ಲ. ಪಿಎಲ್ಎ ಚೀಲ ತುಂಬ ದುಬಾರಿಯಲ್ಲ. ಪ್ಲಾಸ್ಟಿಕ್ ಚೀಲ ಕೆ.ಜಿ.ಗೆ 180 ರೂ.ಇದ್ದರೆ ಈ ಚೀಲಗಳಿಗೆ 200 ರೂ. ನಿಗದಿ ಮಾಡಲಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗುವುದಿಲ್ಲ.
ಪ್ಲಾಸ್ಟಿಕ್ಗೆ ಜೈವಿಕವಾಗಿ ಕೊಳೆಯುವ ಪರ್ಯåಯ ಉತ್ಪನ್ನದ ಅಗತ್ಯ ಹೆಚ್ಚಾಗಿದೆ. ಜೈವಿಕವಾಗಿ ವಿಘಟನೆಯಾಗುವ ಸಸ್ಯಜನ್ಯ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ ಸಂಶೋಧನೆ ಸ್ವಾಗತಾರ್ಹ. ಇವುಗಳಿಂದ ತಯಾರಿಸಿದ ಕ್ಯಾರಿ ಬ್ಯಾಗ್ಗಳಿಗೆ ವಿನಾಯಿತಿ ನೀಡಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಅಗತ್ಯವಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು.
| ಈಶ್ವರ ಖಂಡ್ರೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ
ಪಿಎಲ್ಎ ಆಧಾರಿತ ಚೀಲಗಳು 180 ದಿನದೊಳಗೆ ಗೊಬ್ಬರವಾಗುತ್ತವೆ ಎಂದು ಸಂಶೋಧನಾ ವರದಿಗಳಲ್ಲಿ ಉಲ್ಲೇಖಿತವಾಗಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದರೂ ರಾಜ್ಯದಲ್ಲಿ ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಕೊರತೆ ಇದೆ. ಪ್ಲಾಸ್ಟಿಕ್ ಚೀಲಗಳ ವಿಲೇವಾರಿ ಬಹುದೊಡ್ಡ ಸಮಸ್ಯೆ. ಪರ್ಯಾಯ ಮಾರ್ಗಗಳನ್ನು ಉತ್ತೇಜಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ.
| ಡಾ.ಚಂದ್ರಶೇಖರ ರಾವ್ ಆಯುರ್ವೆದ ಔಷಧ ಮಳಿಗೆ, ಉಡುಪಿ
ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?