ಬೆಂಗಳೂರು: ಯಾವುದೇ ದೊಡ್ಡ ಪ್ರಯಾಣ ಒಂದು ಸಣ್ಣ ಹೆಜ್ಜೆಯಿಂದ ಶುರುವಾಗುತ್ತದೆ ಎಂಬ ಮಾತಿದೆ. ಆದರೆ ಇಲ್ಲೊಂದು ಪ್ರಯಾಣ-ಅಭಿಯಾನ ಹಳೇ ಚಪ್ಪಲಿಯಿಂದ ಶುರುವಾಗುತ್ತಿದೆ. ತಮ್ಮ ಬಳಿ ಹಳೇ ಚಪ್ಪಲಿ ಇರುವ ಯಾರೇ ಆದರೂ ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು. ಇಂಥದ್ದೊಂದು ಅಭಿಯಾನ ಕರಾವಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಮಾಜಿಕ ಕಾರ್ಯಕರ್ತ ಅವಿನಾಶ್ ಕಾಮತ್ ಎಂಬವರು ಹಮ್ಮಿಕೊಂಡಿರುವ ಈ ಅಭಿಯಾನ ನ. 30ರಿಂದ ಡಿ. 2ರ ವರೆಗೆ ಉಡುಪಿಯ ಎಂಜಿಎಂ ಕಾಲೇಜ್ ಕ್ಯಾಂಪಸ್ನಲ್ಲಿ ನಡೆಯಲಿದೆ. ಅಶಕ್ತರಿಗೆ ಉಚಿತವಾಗಿ ಪಾದರಕ್ಷೆ ಒದಗಿಸಲೆಂದೇ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಸುಸ್ಥಿತಿಯಲ್ಲಿರುವ ತಮ್ಮ ಹಳೆಯ ಪಾದರಕ್ಷೆಗಳನ್ನು ಕೊಡುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಈ ಅಭಿಯಾನಕ್ಕೆ ನಡಿಗೆ ಎಂದು ಹೆಸರಿಡಲಾಗಿದ್ದು, ವಿವಿಧ ಸಾಮಾಜಿಕ ಸಂಘಟನೆಗಳು ಕೂಡ ಇದಕ್ಕೆ ಕೈಜೋಡಿಸಿವೆ.
ಫಾರ್ಮಲ್ ಶೂಸ್, ಸ್ಪೋರ್ಟ್ ಶೂಸ್, ಸ್ಲಿಪ್ಪರ್ಸ್, ಸ್ಯಾಂಡಲ್ಸ್, ಫೋಮ್ ಶೂಸ್, ರಬ್ಬರ್ ಶೂಸ್ ಸೇರಿದಂತೆ ಯಾವುದೇ ತೆರನಾದ ಹಳೆಯ ಪಾದರಕ್ಷೆಗಳನ್ನು ನೀಡಬಹುದು. ಆದರೆ ಹೈ ಹೀಲ್ಡ್, ಪಾಯಿಂಟೆಡ್ ಮತ್ತು 10 ವರ್ಷದ ಒಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ಹೀಗೆ ಸಂಗ್ರಹವಾದ ಪಾದರಕ್ಷೆಗಳನ್ನು ಮುಂಬೈನ ಪ್ರತಿಷ್ಠಿತ ಗ್ರೀನ್ ಸೋಲ್ ಸಂಸ್ಥೆಗೆ ಕಚ್ಚಾ ಪದಾರ್ಥದ ರೂಪದಲ್ಲಿ ನೀಡಲಾಗುವುದು. ಅವರು ಇದರಿಂದ ಹೊಸ ಆರಾಮದಾಯಕ ಪಾದರಕ್ಷೆಗಳನ್ನು ತಯಾರಿಸಿ ದೇಶಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡಲಿದ್ದಾರೆ ಎಂದು ಆಯೋಜಕರು ಹೇಳಿಕೊಂಡಿದ್ದಾರೆ.
34 ವರ್ಷದ ಡಾಕ್ಟರ್ ಕುಸಿದು ಬಿದ್ದು ಸಾವು; ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸಿ ಮೆಟ್ಟಿಲೇರುತ್ತಿದ್ದಂತೆ ಹೃದಯಾಘಾತ!