ಅಮೆರಿಕ: ಉಕ್ರೇನ್ ದೇಶದ ಮೇಲೆ ಯುದ್ಧ ಸಾರಿರುವ ರಷ್ಯಾ ಯಾವ ಒತ್ತಡಗಳಿಗೂ ಮಣಿಯದೆ ಯುದ್ಧ ಮುಂದುವರಿಸಿದೆ. ಅಮೆರಿಕ, ನ್ಯಾಟೊ, ಭಾರತ ಸೇರಿದಂತೆ ಹಲವು ದೇಶಗಳು ರಷ್ಯಾದ ಈ ಯುದ್ಧವನ್ನು ಖಂಡಿಸಿವೆ. ಅಮೆರಿಕ ದೇಶ ಅಂತೂ ರಷ್ಯಾ ವಿರುದ್ಧ ಕಿಡಿಕಾರಿದೆ. ಇನ್ನು, ಹಲವು ನಿರ್ಬಂಧಗಳನ್ನು ರಷ್ಯಾ ದೇಶದ ಮೇಲೆ ಹೇರಿದೆ. ಈ ನಡುವೆ ಹಾಲಿವುಡ್ ನಟ ಹಾಗೂ ಅಮೆರಿಕ ನಾಗರಿಕರಾಗಿರುವ ಅರ್ನಾಲ್ಡ್ ಶ್ವಾಜ್ನೆಗರ್ ರಷ್ಯಾದ ಸೈನಿಕರಿಗೆ ಒಂದು ಪ್ರೀತಿಯ ಸಂದೇಶವನ್ನು ಕಳಿಸಿದ್ದಾರೆ. ಆದರೆ, ಆ ಸಂದೇಶದಲ್ಲಿ ನಟ ಅರ್ನಾಲ್ಡ್ ರಷ್ಯಾ ಸೈನಿಕರ ಕೆಲಸವನ್ನು ಹೊಗಳುತ್ತಿಲ್ಲ. ಬದಲಿಗೆ, ಪ್ರೀತಿಯಿಂದ ರಷ್ಯಾ ಸೈನಿಕರಿಗೆ ಬುದ್ಧಿವಾದ ಹೇಳಿದ್ದಾರೆ. ಹೌದು, ಯುದ್ಧವನ್ನು ನಿಲ್ಲಿಸಲು ನಟ ಅರ್ನಾಲ್ಡ್ ಶ್ವಾಜ್ನೆಗರ್ ಮನವಿ ಮಾಡಿದ್ದಾರೆ. ಅಂದಹಾಗೆ, ನಟ ಅರ್ನಾಲ್ಡ್ ಶ್ವಾಜ್ನೆಗರ್ ಅವರು ಒಂಬತ್ತು ನಿಮಿಷಗಳ ಒಂದು ವಿಡಿಯೋದಲ್ಲಿ ರಷ್ಯಾ ದೇಶದ ಬಗ್ಗೆ ಅಲ್ಲಿನ ಜನರ ಬಗ್ಗೆ, ಸರ್ಕಾರದ ಬಗ್ಗೆ ಸೈನಿಕರ ಬಗ್ಗೆ ಹಾಗೂ ಉಕ್ರೇನ್ ಮೇಲಿನ ಯುದ್ಧ, ಯುದ್ಧದ ಕಾರಣಗಳು ಎಂದು ಹಲವು ವಿಷಯಗಳನ್ನು ವಿವರಿಸುತ್ತಾ ತುಂಬಾ ಚೆನ್ನಾಗಿ ಮಾತಾನಾಡಿದ್ದಾರೆ.
ಸದ್ಯ, ನಟ ಅರ್ನಾಲ್ಡ್ರ ಅವರು ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿರುವ ಈ 9 ನಿಮಿಷದ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಧೂಳೆಬ್ಬಿಸುತ್ತಿದೆ. ನಟ ಅರ್ನಾಲ್ಡ್, ”ರಷ್ಯಾದೊಂದಿಗೆ ನನ್ನ ಸಂಬಂಧ ಹಲವು ವರ್ಷಗಳಲ್ಲಿ ಗಾಢವಾಗುತ್ತಾ ಸಾಗಿತು. ನಾನು ನನ್ನ ‘ರೆಡ್ ಟೇಪ್‘ ಸಿನಿಮಾವನ್ನು ರಷ್ಯಾದಲ್ಲಿ ಚಿತ್ರೀಕರಿಸಿದೆ. ರೆಡ್ ಸ್ಕೇರ್ನಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾದ ಮೊದಲ ಅಮೆರಿಕನ್ ಸಿನಿಮಾ ಅದು” ಎಂದಿದ್ದಾರೆ. ”ನಾನು 14 ವರ್ಷದವನಾಗಿದ್ದಾಗಿನಿಂದಲೂ ರಷ್ಯಾದ ಜನರ ಪ್ರೀತಿ, ಗೌರವಗಳನ್ನು ಬೆಳೆಸಿಕೊಂಡು ಬಂದಿದ್ದೀನಿ. ರಷ್ಯಾದ ಜನರ ಶಕ್ತಿ ಮತ್ತು ಹೃದಯದ ಗಟ್ಟಿತನ ನನ್ನಲ್ಲಿ ಸದಾ ಸ್ಪೂರ್ತಿ ತುಂಬಿದೆ. ಹಾಗಾಗಿಯೇ, ನಾನಿಂದು ನಿಮಗೆ ಸತ್ಯ ಹೇಳಲು ಬಂದಿದ್ದೀನಿ. ನನಗೆ ಗೊತ್ತಿದೆ ನಿಮ್ಮ ಸರ್ಕಾರ, ‘ಉಕ್ರೇನ್ ಅನ್ನು ನಾಜಿ ಪ್ರಭಾವದಿಂದ ಮುಕ್ತಗೊಳಿಸುವ ಯುದ್ಧ ಇದೆಂದು‘ ಹೇಳಿದ್ದಾರೆ. ಆದರೆ, ಇದು ಸತ್ಯವಲ್ಲ, ಉಕ್ರೇನ್ನ ಅಧ್ಯಕ್ಷ ಜೂ ಸಮುದಾಯದ ವ್ಯಕ್ತಿ. ಆತನ ಮೂರು ಸಹೋದರರು ಹಾಗೂ ತಂದೆಯನ್ನು ನಾಜಿಗಳು ಕೊಂದಿದ್ದಾರೆ. ಉಕ್ರೇನ್ ಈ ಯುದ್ಧವನ್ನು ಪ್ರಾರಂಭ ಮಾಡಲಿಲ್ಲ. ರಾಷ್ಟ್ರೀಯವಾದಿಗಳು ಅಥವಾ ನಾಜಿಗಳು ಸಹ ಈ ಯುದ್ಧವನ್ನು ಪ್ರಾರಂಭ ಮಾಡಲಿಲ್ಲ. ಬದಲಿಗೆ ರಷ್ಯಾದ ಸರ್ಕಾರ ಈ ಯುದ್ಧವನ್ನು ಪ್ರಾರಂಭ ಮಾಡಿದೆ. ಇದು ರಷ್ಯಾ ಜನರ ಯುದ್ಧವಲ್ಲ”.
”ಉಕ್ರೇನ್ನಲ್ಲಿ ರಷ್ಯಾ ಮಾಡುತ್ತಿರುವ ವಿಧ್ವಂಸದಿಂದಾಗಿ ಇಡೀ ವಿಶ್ವವೇ ರಷ್ಯಾದ ವಿರುದ್ಧ ನಿಂತಿದೆ. ಉಕ್ರೇನ್ನಲ್ಲಿ ರಷ್ಯಾವು ವಿಧ್ವಂಸಕಾರಿ ಕೃತ್ಯಗಳನ್ನು ಮಾಡುತ್ತಿದೆ. ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆಗಳ ಮೇಲೂ ಬಾಂಬ್ಗಳನ್ನು ಎಸೆದಿದೆ. ಮುವತ್ತು ಲಕ್ಷಕ್ಕೂ ಹೆಚ್ಚು ಉಕ್ರೇನ್ ನಿರಾಶ್ರಿತರು ದೇಶಬಿಟ್ಟು ಹೋಗಿದ್ದಾರೆ. ರಷ್ಯಾ ಮಾಡುತ್ತಿರುವ ಕ್ರೂರತನವಾದ್ದರಿಂದ ವಿಶ್ವದ ಇತರ ರಾಷ್ಟ್ರಗಳು ಅದರ ಮೇಲೆ ನಿರ್ಬಂಧ ಹೇರಿವೆ. ಈಗ ರಷ್ಯಾ ಒಂಟಿಯಾಗಿದೆ. ಅಷ್ಟೇ ಅಲ್ಲ ರಷ್ಯಾದ ಸಾವಿರಾರು ಸೈನಿಕರು ಯುದ್ಧದಲ್ಲಿ ಹತರಾಗಿದ್ದಾರೆ. ರಷ್ಯಾದ ಸೈನಿಕರು ತಮ್ಮ ಸರ್ವಾಧಿಕಾರಿಯ ಪರವಾಗಿ ಹೋರಾಡುತ್ತಿದ್ದರೆ. ಉಕ್ರೇನ್ನ ಜನ ತಮ್ಮ ತಾಯ್ನಾಡಿಗಾಗಿ ಹೋರಾಡುತ್ತಿದ್ದಾರೆ. ನನ್ನ ತಂದೆ ಎರಡನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದಾಗಲೂ ಅವರ ಸರ್ಕಾರ ಇದೇ ರೀತಿ ಸುಳ್ಳುಗಳನ್ನು ಸೈನಿಕರಿಗೆ ಹೇಳಿತ್ತು. ಅವರು ಯುದ್ಧಭೂಮಿ ಲೆನಿಗಾರ್ಡ್ ಬಿಟ್ಟು ಬಂದಾಗ ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತವಾಗಿದ್ದರು. ಅವರು ತಮ್ಮ ಇಡೀ ಜೀವನವನ್ನು ನೋವಿನಲ್ಲಿಯೇ ಕಳೆದರು. ದೈಹಿಕ ನೋವು ಒಂದು ಕಡೆಯಾದರೆ, ಅಪರಾಧಿ ಭಾವದ ನೋವನ್ನೂ ಅವರು ಅನುಭವಿಸಿದರು. ರಷ್ಯಾದ ಸೈನಿಕರು ನನ್ನ ಮಾತು ಕೇಳಿಸಿಕೊಳ್ಳುತ್ತಿದ್ದರೆ. ಅವರಿಗೆ ಗೊತ್ತಾಗಿರುತ್ತದೆ ನಾನು ಯಾವ ರೀತಿಯ ನೋವಿನ ಬಗ್ಗೆ ಮಾತನಾಡುತ್ತಿದ್ದೇನೆ ಎಂದು. ಏಕೆಂದರೆ, ನನ್ನ ತಂದೆ ಸಹ ಇಂತಹ ನೋವುಗಳನ್ನು ಅನುಭವಿಸಲು ಆರಂಭಿಸಿದ್ದಾರೆ”, ಎಂದು ತಿಳಿಸಿದ್ದಾರೆ.
”ನೀವು ನಿಮ್ಮ ಕಣ್ಣಾರೆ ನೋವುಗಳನ್ನು ನೋಡಿದ್ದೀರಿ. ನೀವು ನನ್ನ ತಂದೆಯಂತೆ ಜರ್ಜರಿತವಾಗುವುದು ನನಗೆ ಇಷ್ಟವಿಲ್ಲ. ನಿಮ್ಮ ತಾತ, ಮುತ್ತಾತರು ಮಾಡಿದಂತೆ ರಷ್ಯಾವನ್ನು ಕಾಪಾಡಿಕೊಳ್ಳಲು ನೀವು ಯುದ್ಧ ಮಾಡುತ್ತಿಲ್ಲ. ನೀವು ಒಂದು ಅನ್ಯಾಯದ ಯುದ್ಧದ ಭಾಗವಾಗಿದ್ದೀರ. ನಿಮ್ಮ ಜೀವನ ನಿಮ್ಮ ಪ್ರಸ್ತುತ ಮತ್ತು ಭವಿಷ್ಯವನ್ನು, ಒಂದು ಅರ್ಥಹೀನ ಯುದ್ಧ, ವಿಶ್ವವೇ ವಿರೋಧಿಸಿದ ಯುದ್ಧದಲ್ಲಿ ಹೋರಾಡಲು ತ್ಯಾಗ ಮಾಡುತ್ತಿದ್ದೀರಿ. ಈಗ ಯಾರು ಅಧಿಕಾರದಲ್ಲಿದ್ದೀರೋ ಅವರಿಗೆ ನಾನು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮ ವೈಯಕ್ತಿಕ ದುರಾಸೆಗಾಗಿ ಏಕೆ ನೀವು ಈ ಯುವಕರ ಜೀವನವನ್ನು ಬಲಿತೆಗೆದುಕೊಳ್ಳಲು ನಿರತರಾಗಿದ್ದೀರಿ? ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ರಷ್ಯಾದ ಸೈನಿಕರೆ ನಿಮಗಿದು ತಿಳಿದಿರಲಿ, ”11 ಲಕ್ಷಕ್ಕೂ ಹೆಚ್ಚು ರಷ್ಯನ್ನರ ಸಂಬಂಧಿಗಳು ಉಕ್ರೇನ್ನಲ್ಲಿದ್ದಾರೆ. ನೀವು ಹಾರಿಸುವ ಪ್ರತಿ ಗುಂಡು ನಿಮ್ಮ ಅಣ್ಣ–ತಮ್ಮ, ಅಕ್ಕ ತಂಗಿಯರಿಗೇ ತಗುಲುತ್ತಿದೆ. ನೀವು ಎಸೆಯುವ ಬಾಂಬ್ಗಳು ಶತ್ರುಗಳ ಮೇಲೆ ಬೀಳುತ್ತಿಲ್ಲ ಬದಲಿಗೆ ಶಾಲೆ, ಆಸ್ಪತ್ರೆ, ಮನೆಗಳ ಮೇಲೆ ಬೀಳುತ್ತಿದೆ”, ಎಂದು ರಷ್ಯಾದ ಸೈನಿಕರಿಗೆ ಬುದ್ಧಿವಾದ ಹೇಳಿದ್ದಾರೆ.
I love the Russian people. That is why I have to tell you the truth. Please watch and share. pic.twitter.com/6gyVRhgpFV
— Arnold (@Schwarzenegger) March 17, 2022
ಬಳಸದ 8 ಕೋಟಿ ರೂ. ಕಾರನ್ನು ಬೆಂಗಳೂರಿನ ಉದ್ಯಮಿಗೆ ಮಾರಿದ ನಟಿ ಪ್ರಿಯಾಂಕಾ ಚೋಪ್ರಾ!
ಜೇಮ್ಸ್ ಜಾತ್ರೆಯಲ್ಲಿ ಕುಸಿದು ಬಿದ್ದ ಅಪ್ಪು ಅಭಿಮಾನಿ ಹೃದಯಾಘಾತದಿಂದ ಸಾವು
ನಿಯತ್ತಿಲ್ಲ, ಬೇಜವಾಬ್ದಾರಿ, ಅಹಂಕಾರಿ ಎನಿಸಿಕೊಂಡ ರಶ್ಮಿಕಾ ಮಂದಣ್ಣ! ಕಾರಣ?