ಲಖನೌ: ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿ ದೀಪೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಶುರುವಾಗಿವೆ.. ಅಯೋಧ್ಯೆಯ ರಾಮ್ ಕಿ ಪೈದಿ ಘಾಟ್ನಲ್ಲಿ ಈ ಬಾರಿ 5.51 ಲಕ್ಷ ಹಣತೆಗಳು ಬೆಳಗಲಿದ್ದು ದೀಪೋತ್ಸವದ ಮೆರುಗನ್ನು ಹೆಚ್ಚಿಸಲಿವೆ. ಕಳೆದ ವರ್ಷವೂ ಇಷ್ಟೇ ಹಣತೆಗಳನ್ನು ಬೆಳಗಲಾಗಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ಶುಕ್ರವಾರ ಸೂಚನೆ ನೀಡಿದ್ದು, ಕೋವಿಡ್ 19 ತಡೆಗೆ ಅಗತ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ದೀಪೋತ್ಸವಕ್ಕೆ ಸಿದ್ಧತೆ ಮಾಡುವಂತೆ ಅವರು ನಿರ್ದೇಶಿಸಿದ್ದಾರೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ರಾಮ ಮನೋಹರ ಲೋಹಿಯಾ ಅವಧ್ ಯೂನಿವರ್ಸಿಟಿಗಳು ಈ ಸಲದ ದೀಪೋತ್ಸವದ ಆಯೋಜನೆಯ ಹೊಣೆಗಾರಿಕೆ ಹೊತ್ತುಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕರೊನಾ ಕರಿಛಾಯೆಯಲ್ಲೂ ಜಗಮಗಿಸಲಿದೆ ಅಯೋಧ್ಯೆ; ಈ ಸಲ ದೀಪೋತ್ಸವ ಎಂದಿಗಿಂತ ಅದ್ದೂರಿ!
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಯೋಧ್ಯೆಯಲ್ಲಿ ವಿಜೃಂಭಣೆಯ ದೀಪೋತ್ಸವ ಪ್ರತಿ ವರ್ಷ ಆಯೋಜನೆಯಾಗುತ್ತಿದೆ. 2017ರಲ್ಲಿ ಯೋಗಿ ಆದಿತ್ಯನಾಥ್ ಅವರಿಂದಲೇ ಇದು ಆರಂಭವಾಗಿತ್ತು. ಜನರೂ ಸಂಭ್ರಮದಿಂದ ಈ ದೀಪೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಲದ ದೀಪೋತ್ಸವ ನವೆಂಬರ್ 12ರಿಂದ 16ರ ತನಕ ಆಚರಿಸಲ್ಪಡಲಿದೆ. (ಏಜೆನ್ಸೀಸ್)