ರಾಮದುರ್ಗ: ಉದ್ಯಮ, ರೈತ ಸಮುದಾಯಕ್ಕೆ ಅತಿ ಅವಶ್ಯಕವಾದ ವಿದ್ಯುತ್ ಸರಬರಾಜಿನ ಕಡೆಗೆ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ, ದೇಶಕ್ಕೆ ಅನ್ನ ನೀಡುವ ರೈತರ ಬಾಳಿಗೆ ಬೆಳಕಾಗುವಲ್ಲಿ ಶ್ರಮಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ರಾಮದುರ್ಗ 110/33/11 ಕೆ.ವಿ ಸ್ಟೇಶನ್ನಲ್ಲಿ 43 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು. ಸ್ಥಳೀಯ ಹೆಸ್ಕಾಂ ಇಲಾಖೆಗೆ ಬೇಕಾದ ಸೌಲಭ್ಯ ಒದಿಗಿಸಲು ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರಾತಿಗೆ ಪ್ರಯತ್ನಿಸುತ್ತೇನೆ. ತಾಲೂಕಿನ ಹುಲಕುಂದ, ಸುರೇಬಾನ್, ಸಾಲಹಳ್ಳಿ ಸೇರಿದಂತೆ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಹೆಚ್ಚುವರಿ ಸಾಮರ್ಥ್ಯ ಹೊಂದಿದ ವಿದ್ಯುತ್ ಪರಿವರ್ತಕಗಳ ಉನ್ನತೀಕರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಲಾಖೆಯ ಅಧಿಕಾರಿಗಳು ರೈತರ ಜಮೀನಿನಲ್ಲಿರುವ ಬೋರ್ವೆಲ್ಗಳ ವಿದ್ಯುತ್ ಪರಿವರ್ತಕಗಳು ದುರಸ್ತಿಗೆ ಬಂದಲ್ಲಿ ಅವುಗಳನ್ನು ಶೀಘ್ರ ಬದಲಾಯಿಸಿ ಕೊಡಲು ಪ್ರಯತ್ನಿಸಬೇಕು. ವಿನಾಕಾರಣ ಕಾಲಹರಣ ಮಾಡಿ, ರೈತರಿಗೆ ಸಮಸ್ಯೆ ಉಂಟು ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೆಸ್ಕಾಂ ಸಹಾಯಕ ಕಾರ್ಯನಿವಾಹಕ ಅಭಿಯಂತರ ರಾಮಕೃಷ್ಣ ಗುನಗಾ, ಹೆಸ್ಕಾಂ ನೋಡಲ್ ಅಧಿಕಾರಿ ಎ.ಆರ್. ಕರಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಲಾಖೆ ಸಹಾಯಕ ಕಾರ್ಯನಿವಾಹಕ ಅಭಿಯಂತರ ರೂಪಾ ಹಾಲಪ್ಪನವರ, ಎಇ ಸೋಹಿಲ್ ನದಾಫ್, ಎಎಒ ನರಸಿಂಹ ಶೆಟ್ಟಿ, ಗುತ್ತಿಗೆದಾರ ಚೆನ್ನಯ್ಯ ಹಿರೇಮಠ, ಎಇ ಪ್ರಭಾವತಿ ಗಂಧದ, ಹನುಮಂತ ರೊಟ್ಟಿ, ಗುರುಪಾದಪ್ಪ ಬನ್ನೂರ ಇತರರು ಇದ್ದರು.