ಬೆಳಗಾವಿ: ಕಸ ವಿಲೇವಾರಿ ವಾಹನವು ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಪೌರ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರ ಇಲ್ಲಿನ ಹಣ್ಣಿನ ಮಾರುಕಟ್ಟೆ ಬಳಿ ಸಂಭವಿಸಿದೆ.
ಗಣೇಶಪುರದ ಜ್ಯೋತಿ ನಗರದ ನಿವಾಸಿ ಜಿತೇಂದ್ರ ಡಾವಾಳೆ (35) ಮೃತರು. ವಾಹನವು ಕಸ ವಿಲೇವಾರಿ ಘಟಕಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಜಿತೇಂದ್ರ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತನಿಗೆ ಪಾಲಿಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುಟುಂಬದವರು ಹಾಗೂ ಪೌರ ಕಾರ್ಮಿಕರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದರು. ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.