ದೇವನಹಳ್ಳಿ: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಅಭ್ಯರ್ಥಿಗಳು ಬೈಕ್ ರ್ಯಾಲಿ, ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸುವ ಮೂಲಕ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುವ ಮೂಲಕ ತಮ್ಮ ಎದುರಾಳಿ ಅಭ್ಯರ್ಥಿಗೆ ತಮ್ಮಗಿರುವ ಬೆಂಬಲಿಗರ ಪಡೆಯನ್ನು ತೋರಿಸುತ್ತಿದ್ದಾರೆ.
ಬಹುತೇಕರು ತೆರೆದ ವಾಹನ, ಬೈಕ್ ಚಲಾಯಿಸಿ, ಪಕ್ಷದ ಮುಖಂಡರ ಜೊತೆ ಬಂದು ನಾಮಪತ್ರ ಸಲ್ಲಿಸಿರುವುದನ್ನು ನೋಡಿದ್ದೇವೆ. ಆದರೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಬಿ.ಕೆ. ಶಿವಪ್ಪ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕುದುರೆ ಏರಿ ಬಂದ ಅಭ್ಯರ್ಥಿ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಬಿ.ಕೆ. ಶಿವಪ್ಪ ತಮ್ಮ ನಾಮಪತ್ರವನ್ನು ಸಲ್ಲಿಸಲು ಕುದುರೆ ಏರಿ ಬಂದಿರುವುದು ಎಲ್ಲರ ಗಮನ ಸೆಳೆದಿದೆ.
ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲು ಶಿವಪ್ಪ ಕುದುರೆ ಏರಿ ಬರುತ್ತಿರುವುದು ವಿಶೇಷವೆನಿಸಿದ್ದು ಇವರಿಗೆ ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಾಥ್ ನೀಡಿದ್ಧಾರೆ.
ಇದನ್ನೂ ಓದಿ: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; 2023ರ ಜಾಗತಿಕ ವರದಿ ಪ್ರಕಟ
ಎತ್ತಿನ ಬಂಡಿ ಖಾಲಿ ಸಿಲಿಂಡರ್ ಜೊತೆ ಬಂದ ಅಭ್ಯರ್ಥಿ
ದೇವನಹಳ್ಳಿ ನಗರದ ಕೋಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ತಾಲ್ಲೂಕು ಕಚೇರಿವರೆಗೂ ರ್ಯಾಲಿ ನಡೆಸಿದ ಶಿವಪ್ಪಗೆ ಅಪಾರ ಬೆಂಬಲಿಗರು ಸಾಥ್ ನೀಡಿದರು.
ಈ ವೇಳೆ ಅಭ್ಯರ್ಥಿ ಶಿವಪ್ಪ ಎತ್ತಿನ ಬಂಡಿ, ಕಾಲಿ ಸಿಲಿಂಡರ್ ಜೊತೆ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದರು ಮತ್ತು ಪರೋಕ್ಷವಾಗಿ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.