ಆನೇಕಲ್: ರಾಜ್ಯದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳೆಲ್ಲಾ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ದೊಡ್ಡ ಮಟ್ಟದಲ್ಲೇ ರ್ಯಾಲಿ ನಡೆಸಿ, ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ಎದುರಾಳಿ ಅಭ್ಯರ್ಥಿಗೆ ತಮ್ಮಗಿರುವ ಬೆಂಬಲ ಪ್ರದರ್ಶಿಸುತ್ತಿದ್ದಾರೆ.
ಇದೀಗ ಆನೇಕಲ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ.ವೈ.ಚಿನ್ನಪ್ಪ ಅವರು ವಿಭಿನ್ನವಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಹುತೇಕ ಅಭ್ಯರ್ಥಿಗಳು ತೆರೆದ ವಾಹನ, ನಡಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸುತ್ತಿದ್ದರೆ, ಡಾ.ವೈ.ಚಿನ್ನಪ್ಪ ಅವರು ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ; ದೇವೆಗೌಡರಿಂದ ಬಿ ಫಾರ್ಮ್ ಪಡೆಯುತ್ತಲೇ ಕಣ್ಣೀರು!
ವಿಭಿನ್ನ ಕಾರ್ಯಕ್ರಮ ಆಯೋಜನೆ
ಬಿಎಸ್ಪಿ ಅಭ್ಯರ್ಥಿ ಡಾ.ವೈ.ಚಿನ್ನಪ್ಪ ಅವರು ಆನೇಕಲ್ ಕ್ಷೇತ್ರದಲ್ಲಿ ಹಲವು ದಿನಗಳಿಂದ ಮತದಾರರನ್ನು ತನ್ನತ್ತ ಸೆಳೆಯಲೆಂದು ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದಿದ್ದರು. ಇದೀಗ ಕಾರ್ಯಕರ್ತರು, ಜಾನಪದ ಕಲಾತಂಡಗಳೊಂದಿಗೆ ಆನೆ ಮೇಲೆ ಕುಳಿತು ಬಂದು ಸುದ್ದಿಯಾಗಿದ್ದಾರೆ.
ಕೃತಕ ಆನೆ!
ವಾಸ್ತವವಾಗಿ ಬಿಎಸ್ಪಿ ಅಭ್ಯರ್ಥಿ ಡಾ.ವೈ ಚಿನ್ನಪ್ಪ ಅವರು ಕುಳಿತು ಬಂದಿರುವುದು ನಿಜವಾದ ಆನೆಯ ಮೇಲಲ್ಲ. ಬದಲಾಗಿ ಕೃತಕ ಆನೆಯ ಮೇಲೆ ಕುಳಿತು ನಾಮಪತ್ರ ಸಲ್ಲಿಕೆ ಮಾಡಲು ಬಂದಿದ್ದಾರೆ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ತಾಲೂಕು ಕಚೇರಿಗೆ ಬಂದಿದ್ದಾರೆ.
ಇದನ್ನೂ ಓದಿ: ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!