ಬೆಂಗಳೂರು: ಉದ್ಯಮಿ, ಕಾಂಗ್ರೆಸ್ ಮುಖಂಡ ಯೂಸುಫ್ ಶರೀಪ್ ಅಲಿಯಾಸ್ ಕೆಜಿಎಫ್ ಬಾಬು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಹೈಗ್ರೌಂಡ್ಸ್ ಬಳಿ ಇರುವ ರುಕ್ಸಾನಾ ಪ್ಯಾಲೇಸ್ಗೆ ಬೆಳಗ್ಗೆ 6 ಘಂಟೆ ಸುಮಾರಿಗೆ ದಾಳಿ ಮಾಡಿದ ಅಧಿಕಾರಿಗಳು ಅಪಾರ ಪ್ರಮಾಣದ ಸೀರೆ ಹಾಗೂ ಡಿಡಿಗಳನ್ನು ವಶಕ್ಕೆ ಪಡೆದಿದ್ಧಾರೆ.
ಆಕ್ರೋಶ
ಇನ್ನು ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿಯಾಗಿರುವ ವಿಷಯ ತಿಳಿದು ಅವರ ನಿವಾಸದ ಬಳಿ ಬೆಂಬಲಿಗರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ತಮ್ಮ ನಾಯಕನ ಪರ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಅಭಿಮಾನಿಯೊಬ್ಬರು ಕೆಜಿಎಫ್ ಬಾಬು ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು ಅವರು ಎಲ್ಲಿ ಗೆದ್ದು ಬಿಡುತ್ತಾರೋ ಎಂಬ ಭಯದಿಂದ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ದಾಳಿ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ ಪ್ರಕರಣ; ಸಾವಿರಾರು ಸೀರೆ-ಡಿಡಿ ವಶಕ್ಕೆ
ಲಾಠಿ ಚಾರ್ಜ್
ಹೆಚ್ಚಿನ ಜನರು ಕೆಜಿಎಫ್ ಬಾಬು ಮನೆ ಬಳಿ ಹೆಚ್ಚಿನ ಜನ ಜಮಾವಣೆಗೊಂಡು ಘೋಷಣೆಗಳನ್ನು ಕೂಗಿದ ಕಾರಣ ಐಟಿ ಅಧಿಕಾರಿಗಳ ಕರ್ತ್ಯವಕ್ಕೆ ಅಡ್ಡಪಡಿಸಿದಂತಾಗುತ್ತದೆ ಎಂದು ಪೊಲೀಸರು ತಿಳಿ ಹೇಳಿದರು.
ಇದಕ್ಕೊಪ್ಪದ ಅಭಿಮಾನಿಗಳು ಹಾಗೂ ಬೆಂಬಲಿಗರು ಘೋಷಣೆಗಳನ್ನು ಕೂಗಲು ಮುಂದುವರೆಸಿದರು. ಈ ವೇಳೆ ಪರಿಸ್ಥಿತಿಯನ್ನು ಹತ್ತೋಟಿಗೆ ತರಲು ಪೊಲೀಸರು ಮಹಿಳೆಯರು, ವೃದ್ದರು ಎಂದು ನೋಡದೆ ಲಾಠಿ ಚಾರ್ಜ್ ಮಾಡಿದ್ದಾರೆ.
ನಾಮಪತ್ರ ಸಲ್ಲಿಸಬೇಕಾಗಿತ್ತು
ಕಾಂಗ್ರೆಸ್ ಪಕ್ಷದಿಂದ ಚಿಕ್ಕಪೇಟೆ ವಿಧಾನಸಬಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕೆಜಿಎಫ್ ಬಾಬು ಬುಧವಾರ ಮಧ್ಯಾಹ್ನ 2:00 ಘಂಟೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವವರಿದ್ದರು. ಆದರೆ, ನಾಮಪತ್ರ ಸಲ್ಲಿಕೆಗೂ ಮುನ್ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡುವ ಮೂಲಕ ಶಾಕ್ ನೀಡಿದ್ಧಾರೆ.
ಇನ್ನು ಇತ್ತಿಚಿಗೆ ಪಕ್ಷ ವಿರೋಧಿ ಹೇಳಿಕೆ ನೀಡುತ್ತ ಇರುಸು-ಮುರುಸು ಉಂಟು ಮಾಡಿದ ಆರೋಪದ ಮೇಲೆ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು.