More

    ಸಾಮಾಜಿಕ ಬದ್ಧತೆ ಪ್ರಕಟಿಸುವ ಅಗತ್ಯ ಈಗ ಅತಿಹೆಚ್ಚು; ‘ಆ ಪತ್ರಿಕೋದ್ಯಮ’ ಕೃತಿ ಬಿಡುಗಡೆ ಮಾಡಿದ ಸಿಎನ್​ಆರ್​

    ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಮತ್ತು ಬಹುರೂಪಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುರೂಪಿ ಸಂಸ್ಥೆ ಪ್ರಕಟಿಸಿರುವ, ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರ ‘ಆ ಪತ್ರಿಕೋದ್ಯಮ..’ ಕೃತಿಯನ್ನು ವಿಮರ್ಶಕ ಪ್ರೊ.ಸಿ.ಎನ್​.ರಾಮಚಂದ್ರನ್​ ಇಂದು ಬಿಡುಗಡೆ ಮಾಡಿದರು.

    ಬಳಿಕ ಕೃತಿಯ ಕುರಿತು ಮಾತನಾಡಿದ ಸಿ.ಎನ್​.ರಾಮಚಂದ್ರನ್​, ಜಿ.ಎನ್. ರಂಗನಾಥರಾವ್ ಅವರು ತಮ್ಮ ಕೃತಿಯಲ್ಲಿ ಮಾಧ್ಯಮಗಳು ವೃತ್ತಿನಿಷ್ಠತೆ ಮೆರೆಯಬೇಕಾದ ಅಗತ್ಯವನ್ನು ದೃಷ್ಟಾಂತಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಆಳುವ ವರ್ಗದ ಓಲೈಕೆ ಮಾಡದೆ, ಕಾರ್ಪೋರೇಟ್​ ಸಂಸ್ಥೆಗಳ ಬೆನ್ನು ಬೀಳದೆ, ಸತ್ಯಕ್ಕೆ ಅಪಚಾರವಾಗದೆ ಸಾಮಾಜಿಕ ಬದ್ಧತೆ ಪ್ರಕಟಿಸುವ ಅಗತ್ಯ ಈ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದು ಹೇಳಿದರು.

    ಜಾಹೀರಾತಿನ ಒತ್ತಡಕ್ಕೆ ಇಂದು ಮಾಧ್ಯಮಗಳು ತನ್ನತನವನ್ನು ಕಳೆದುಕೊಳ್ಳುವ, ಜನಪರ ನಿಲುವಿನಿಂದ ದೂರ ಸರಿಯುವ ನಿಟ್ಟಿನಲ್ಲಿವೆ. ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ರಂಗನಾಥರಾವ್ ತಮ್ಮ ಕಾಲದ ಪತ್ರಿಕೋದ್ಯಮ ಹೇಗೆ ಸತ್ಯನಿಷ್ಠುರತೆಯ ಪರವಾಗಿತ್ತು. ಜಾಹೀರಾತು ಆಮಿಷವನ್ನು ಮೆಟ್ಟಿ ನಿಂತಿತ್ತು ಎನ್ನುವುದನ್ನು ಸಾರಿದ್ದಾರೆ. ಈ ಕೃತಿ ಇಂದಿನ ಪತ್ರಕರ್ತರಿಗೂ, ಅದೇ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಅಗತ್ಯ ಪಠ್ಯ ಎಂದು ಅಭಿಪ್ರಾಯಪಟ್ಟರು.

    ಸಾಹಿತಿ, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಆರತಿ ಹೆಚ್.ಎನ್. ಮಾತನಾಡಿ ಆ ಪತ್ರಿಕೋದ್ಯಮ ಹಾಗೂ ಈ ಪತ್ರಿಕೋದ್ಯಮಗಳ ಮಧ್ಯೆ ದೊಡ್ಡ ಕಂದರವಿದೆ. ಇದಕ್ಕೆ ಮುಖ್ಯ ಕಾರಣ ಪತ್ರಿಕೋದ್ಯಮದ ಆದ್ಯತೆಗಳು ಬದಲಾಗಿರುವುದು. ತಂತ್ರಜ್ಞಾನ ಕಾಲಿಟ್ಟ ಮೇಲೆ ಸಮಾಜಮುಖಿ ನೋಟ ಇಲ್ಲವಾಗುತ್ತಿದೆ. ವ್ಯಷ್ಟಿಯ ಎದುರು ಸಮಷ್ಟಿಯ ಆದ್ಯತೆ ಇಲ್ಲವಾಗುತ್ತಿದೆ ಎಂದರು. ಇ-ಮಾಧ್ಯಮಗಳ ಕಾಲದಲ್ಲಿ ಮನುಷ್ಯತ್ವದ ಮೇಲಿನ ಒತ್ತು ಕಡಿಮೆಯಾಗುತ್ತಿದೆ. ಈ ಕೃತಿಯನ್ನು ಓದಿದಾಗ ಮಾಧ್ಯಮಗಳು ಇಷ್ಟು ಜನಪರವಾಗಿತ್ತೇ ಎಂದು ಅನಿಸದೇ ಇರಲು ಸಾಧ್ಯವಿಲ್ಲ ಎಂದರು.

    ಜಾಗತೀಕರಣದ ನಂತರ ಮಾಧ್ಯಮ ಇನ್ನೊಂದು ಉದ್ಯಮವಾಗಿ ಬದಲಾಗಿದೆ. ಈ ಮೊದಲಿನ ಮಾಧ್ಯಮಕ್ಕೆ ಸಮಾಜವನ್ನು ಕಟ್ಟುವ ಕನಸುಗಳಿದ್ದವು. ಆದರೆ ಕೊಳ್ಳುಬಾಕ ಸಂಸ್ಕೃತಿಗೆ ಉತ್ತೇಜನ ನೀಡಿದ ಜಾಗತೀಕರಣ, ಮಾಧ್ಯಮವನ್ನು ವ್ಯಾಪಾರದ ಇನ್ನೊಂದು ಸರಕನ್ನಾಗಿ ಮಾಡಿದೆ ಎಂದು ಸಾಹಿತಿ, ಬಹುರೂಪಿಯ ಜಿ.ಎನ್. ಮೋಹನ್ ವಿಷಾದ ವ್ಯಕ್ತಪಡಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ವಿ.ಗುಂಡಪ್ಪ (ಡಿವಿಜಿ) ಅವರು ಪತ್ರಕರ್ತರಿಗಾಗಿ ಹುಟ್ಟುಹಾಕಿದ ಸಂಘ ಇಂದು ರಾಜ್ಯದ ಉದ್ದಗಲಕ್ಕೂ ಅಗಾಧವಾಗಿ ಬೆಳೆದಿದೆ. ಪತ್ರಕರ್ತರ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಗಮನ ನೀಡುವುದಲ್ಲದೆ ಪತ್ರಕರ್ತರ ಸೃಜನಶೀಲ ಕೆಲಸಗಳಿಗೂ ಆದ್ಯತೆ ನೀಡುತ್ತಿದೆ. ರಂಗನಾಥ ರಾವ್ ಈ ಸಂಘದ ಹಿರಿಯರಾಗಿದ್ದು ಅವರ ಪತ್ರಿಕೋದ್ಯಮ ಪಯಣದ ಕಥನ ಇಂದಿನ ಪೀಳಿಗೆಗೆ ದಾರಿದೀಪ ಎಂದು ಅವರು ಅಭಿಪ್ರಾಯಪಟ್ಟರು.

    ಬಹುರೂಪಿಯ ಶ್ರೀಜಾ ವಿ.ಎನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಕಾರ್ಯಕ್ರಮ ನಿರ್ವಹಿಸಿದರು. ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು ಹಾಜರಿದ್ದರು. ಜಿ.ಎನ್.ರಂಗನಾಥ ರಾವ್ ಅವರಿಗೆ ಕೆಯುಡಬ್ಲ್ಯುಜೆ ವತಿಯಿಂದ ಸನ್ಮಾನಿಸಲಾಯಿತು. ‘ಆ ಪತ್ರಿಕೋದ್ಯಮ’ ಕೃತಿ ಬಹುರೂಪಿ (70191 82729) ಸಂಸ್ಥೆಯಲ್ಲಿ ಲಭ್ಯವಿದೆ.

    ನಿಮ್ಮೂರಿಗೀಗ ಅವರಲ್ಲ, ಇವರೇ ಇನ್​ಸ್ಪೆಕ್ಟರ್​; 13 ಡಿವೈಎಸ್​ಪಿಗಳೂ ಟ್ರಾನ್ಸ್​ಫರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts