ಮಂಡ್ಯ: ಸ್ಪೇನ್ ದೇಶದ ಯುವಕನನ್ನು ಕೆ.ಆರ್.ಪೇಟೆ ಯುವತಿ ಈಶಾ ಫೌಂಡೇಶನ್ನಲ್ಲಿ ವಿವಾಹವಾಗಿದ್ದು ನವ ಜೋಡಿಯ ಆರತಕ್ಷತೆ ಸೋಮವಾರ ಪಟ್ಟಣದಲ್ಲಿ ನಡೆಯಿತು.
ಸ್ಪೇನ್ ದೇಶದ ಜಾನ್ವೈಡಲ್ ಮತ್ತು ಕೆ.ಆರ್.ಪೇಟೆಯ ಬಿ.ಆರ್.ದೀಕ್ಷಿತಾ ವಿವಾಹವಾದವರು. ಪಟ್ಟಣದ ಶಮಂತ್ ಟೆಕ್ಸ್ಟೈಲ್ಸ್ ಮಾಲೀಕ ರವೀಂದ್ರನಾಥ್ ಅವರ ಪುತ್ರಿ ದೀಕ್ಷಿತಾ ಕೊಯಮತ್ತೂರಿನ ಈಶಾ ಫೌಂಡೇಶನ್ನಲ್ಲಿ ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಸ್ಪೇನ್ ದೇಶದ ಬಾರ್ಸಿಲೋನ ನಗರದ ಯುವಕ ಜಾನ್ವೈಡಲ್ ಪರಿಚಯವಾಗಿದ್ದ. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತು. ಈಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಅವರ ಮೂಲಕ ಎರಡೂ ಕುಟುಂಬಗಳ ಮನವೊಲಿಸಿ ಫೌಂಡೇಶನ್ನಲ್ಲೇ ವಿವಾಹ ಮಾಡಲಾಯಿತು.
ವರ ಜಾನ್ವೈಡಲ್ ತಂದೆ-ತಾಯಿ, ಸಹೋದರ, ಸಹೋದರಿ, ವಧುವಿನ ತಂದೆ-ತಾಯಿ, ಬಂಧುಗಳು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ವಿದೇಶಿ ವರನೊಂದಿಗೆ ಕನ್ನಡದ ಕೆ.ಆರ್.ಪೇಟೆಯ ಹುಡುಗಿ ದೀಕ್ಷಿತಾ ಹಿಂದು ಸಂಪ್ರದಾಯದಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆರತಕ್ಷತೆ ಸಂಭ್ರಮದಲ್ಲಿ ಸಾವಿರಾರು ಜನರು, ಬಂಧುಗಳು, ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು.
ಜಾನ್ವೈಡಲ್ ತುಂಬಾ ಒಳ್ಳೆಯ ಹುಡುಗ. ಎಲ್ಲ ದೈವ ಇಚ್ಛೆ. ಮಗಳ ಆಸೆಗೆ ಪ್ರೋತ್ಸಾಹ ನೀಡಿ ಮದುವೆ ಮಾಡಿಕೊಟ್ಟಿದ್ದೇವೆ. ಮಗಳು, ಅಳಿಯ ಇಬ್ಬರೂ ಈಶಾ ಫೌಂಡೇಶನ್ನಲ್ಲಿ ಯೋಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಗುರುಗಳ ಆಶೀರ್ವಾದವಿದೆ.
ರವೀಂದ್ರನಾಥ್, ವಧುವಿನ ತಂದೆ
ಈಶಾ ಫೌಂಡೇಶನ್ಗೆ ಯೋಗ ಕಲಿಯಲು ಬಂದ ಜಾನ್ವೈಡಲ್ ಮೇಲೆ ಪ್ರೀತಿಯಾಯಿತು. ನಮ್ಮ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿದ್ದು ನಮಗೆ ಸಂತೋಷವಾಗಿದೆ. ಜಾನ್ ಕನ್ನಡ ಕಲಿಯುತ್ತಿದ್ದಾರೆ. ನಾನು ಸ್ಪೇನೀಶ್ ಭಾಷೆ ಕಲಿತಿದ್ದೇನೆ. ಇಬ್ಬರೂ ಚೆನ್ನಾಗಿ ಜೀವನ ನಡೆಸಿ ಸಾಧಿಸಿ ತೋರಿಸುತ್ತೇವೆ ಎಂದು ನವ ವಧು ಧೀಕ್ಷಿತಾ ಹೇಳಿದರು.