ಉಳ್ಳಾಲ: ದುಬೈಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ತಾಲೂಕಿನ ಯುವತಿ, ಬಿಜೆಪಿ ಮುಖಂಡೆಯ ಪುತ್ರಿ ಸಾವನ್ನಪ್ಪಿದ್ದಾರೆ.
ಕೋಟೆಕಾರ್ ಬೀರಿ ಕೆಂಪುಮಣ್ಣು ನಿವಾಸಿ ವಿಠಲ್ ಕುಲಾಲ್ ಕೆಂಪುಮಣ್ಣು ಎಂಬುಬರ ಏಕೈಕ ಪುತ್ರಿಯಾದ ವಿದಿಶಾ (28) ಮೃತ ಯುವತಿ.
ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದ ಇವರು 2019ರಲ್ಲಿ ದುಬಾಯಿಗೆ ತೆರಳಿದ್ದರು. ಕಳೆದೊಂದು ವರ್ಷದಿಂದ ವಿಮಾನ ನಿಲ್ದಾಣದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದುಬಾಯಿಯಲ್ಲಿ ವಾಹನ ಚಾಲನಾ ಪರವಾನಗಿ ಹೊಂದಿದ್ದ ಅವರು, ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದರು. ಗುರುವಾರ ಕೆಲಸಕ್ಕೆ ತೆರಳಲು ತಡವಾಗಿದ್ದರಿಂದ ಕ್ಯಾಬ್ ತಪ್ಪಿದ್ದರಿಂದ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಯುವತಿಯ ತಾಯಿ ರಾಜೀವಿ ಕೆಂಪುಮಣ್ಣು ಅವರು, ಬಿಜೆಪಿ ಮುಖಂಡೆಯಾಗಿದ್ದು, ಮಂಗಳೂರು ತಾಪಂ ಮಾಜಿ ಉಪಾಧ್ಯಕ್ಷೆಯಾಗಿದ್ದಾರೆ.