ಬೆಂಗಳೂರು: ಕಾಂಗ್ರೆಸ್ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜ್ಯಸಭಾ ಚುನಾವಣಾ ಕಣ ರಂಗೇರುವಂತೆ ಮಾಡಿದರೆ, ಅತ್ತ ಬಿಜೆಪಿಯು 3ನೇ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಸಜ್ಜಾಗಿದೆ. ಬಿಜೆಪಿಯಿಂದ 3ನೇ ಅಭ್ಯರ್ಥಿ ಅಖಾಡಕ್ಕಿಳಿದರೆ ಮೂರು ಪಕ್ಷಗಳ ಲೆಕ್ಕಾಚಾರದ ಚಿತ್ರಣವೇ ಬದಲಾಗಲಿದೆ.
ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಚಿತ್ರನಟ ಜಗ್ಗೇಶ್ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ನಿಂದ ಜೈರಾಮ್ ಮತ್ತು ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿಗೆ ಟಿಕೆಟ್ ಸಿಕ್ಕಿದೆ. 4ನೇ ಅಭ್ಯರ್ಥಿ ಗೆಲುವಿಗೆ ಯಾರ ಬಳಿಯೂ ಬಹುಮತ ಇಲ್ಲ. ಬಿಜೆಪಿಯಿಂದ 3ನೇ ಅಭ್ಯರ್ಥಿ ಅಖಾಡಕ್ಕಿಳಿದರೆ ಜಿದ್ದಾಜಿದ್ದಿನ ಪೈಪೋಟಿ ಎದುರಾಗಲಿದೆ.
ಬಿಜೆಪಿ 122 ಶಾಸಕರ ಬಲ ಹೊಂದಿರುವುದರಿಂದ 3ನೇ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತ ಹಾಕುವ ಮೂಲಕ ಗೆಲುವು ಪಡೆಯಬಹುದು. ರಾಜ್ಯಸಭೆ ಗೆಲುವಿನ ಲೆಕ್ಕಾಚಾರದಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಆಪರೇಷನ್ ಕಾಂಗ್ರೆಸ್ ನಡೆದರೆ ಲೆಕ್ಕಾಚಾರ ಉಲ್ಟಾ ಆಗಬಹುದು.
ಈ ವೇಳೆ ಶಾಸಕ ಜಮೀರ್ ಅಹ್ಮದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಜೆಡಿಎಸ್ನ ಹಲವು ಶಾಸಕರು ನಮ್ಮೊಂದಿಗೆ ಟಚ್ನಲ್ಲಿದ್ದಾರೆ. ನೋಡೋಣ ಮುಂದೇನಾಗುತ್ತೆ’ ಎನ್ನುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಾಂಗ್ರೆಸ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ರಣತಂತ್ರ ಹೆಣೆದ ಕಾಂಗ್ರೆಸ್! ಇಲ್ಲಿದೆ ಕೈ ನಾಯಕರ ಲೆಕ್ಕಾಚಾರ