ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರಿಗೂ ಮೊದಲೇ ಪುನೀತ್ ತೆರೆಮೇಲೆ ಕಾಣಿಸಿಕೊಂಡವರು. 1989ರವೆರೆಗೆ ಬಾಲನಟನಾಗಿದ್ದ ಪುನೀತ್, ಆ ನಂತರ ಸಿನಿಮಾ-ಗಿನಿಮಾ ಎಲ್ಲ ಬೇಡ. ಏನಾದರೂ ವ್ಯಾಪಾರ ಮಾಡಿಕೊಂಡಿರಬೇಕು ಎಂದು ನಿರ್ಧರಿಸಿದ್ದರು. ಆದರೆ ಅವರು ಮತ್ತೆ ಸಿನಿಮಾಕ್ಕೆ ಬಂದಿದ್ದೇ ಅಚಾನಕ್ ಅಂತೆ!
‘ಬಾಲನಟನಾಗಿ ನನ್ನ ಕೊನೇ ಚಿತ್ರ ಪರಶುರಾಮ, ನನಗಾಗ 13 ವರ್ಷ. ಆಮೇಲೆ ಸಿನಿಮಾ-ಗಿನಿಮಾ ಎಲ್ಲ ಬೇಡ. ಏನಾದರೂ ವ್ಯಾಪಾರ ಮಾಡಿಕೊಂಡಿರೋಣ. ಇಲ್ಲ, ಚಲನಚಿತ್ರ ಹಂಚಿಕೆದಾರನಾಗೋಣ ಎಂದುಕೊಂಡೆ. ಅದ್ಯಾವುದೂ ವರ್ಕೌಟ್ ಆಗದಿದ್ದಾಗ, ಮತ್ತೆ ನಟನಾಗಿ ಒಂದು ಕೈ ನೋಡೇಬಿಡೋಣ… ಎಂದು ಹೀರೋ ಆದೆ’ ಎಂದು ಹಲವು ಬಾರಿ ಖುಷಿ ಹಂಚಿಕೊಂಡಿದ್ದರು ಪುನೀತ್. ‘ಐ ಲವ್ ಸಿನಿಮಾ, ಇದೊಂದು ಸಾಗರ, ಇಲ್ಲಿ ಕಲಿಕೆಗೆ ಕೊನೇನೆ ಇಲ್ಲ’ ಎನ್ನುತ್ತಿದ್ದ ಅಪ್ಪು, ‘ಈಗ ಹೀರೋ ಆಗಿದ್ದೇನೆ. ಡೈರೆಕ್ಟರ್ ಹೇಳಿದ್ದನ್ನು ಕೇಳಿ ಅಭಿನಯಿಸುತ್ತೇನೆ. 60-65 ವರ್ಷವಾದ ಮೇಲೆ ಅಪ್ಪನ ಪಾತ್ರ ಮಾಡಬೇಕಾಗಿ ಬರಬಹುದು. ಆಗಲೂ ಡೈರೆಕ್ಟರ್ ಬಂದು ಹೀಗೆ ಮಾಡಬೇಕು ಅಂತ ಹೇಳುತ್ತಾರೆ. ಅದನ್ನು ತಿಳಿದುಕೊಂಡೇ ಮಾಡಬೇಕಾಗುತ್ತೆ’ ಎಂದು ಕಲಾವಿದರಾದವರು ಸದಾ ಒಂದಿಲ್ಲೊಂದು ಕಲಿಯುತ್ತಲೇ ಇರಬೇಕು ಎನ್ನುವುದನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಿದ್ದರು.
ಡಾ. ರಾಜಕುಮಾರ್ ತಮ್ಮ ವೃತ್ತೀಜಿವನದಲ್ಲಿ ಅದೆಷ್ಟೇ ಅದ್ಭುತ ಅಭಿನಯವನ್ನು ಮಾಡಿದರೂ, ಅವರಿಗೆ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಬರಲಿಲ್ಲ ಎಂಬ ಬೇಸರ ಕನ್ನಡಿಗರಿಗಿದೆ. ಡಾ. ರಾಜಕುಮಾರ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ನಟನೆಗೆ ಪ್ರಶಸ್ತಿ ಬರದಿದ್ದರೂ, ಪುನೀತ್ ಮಾತ್ರ ಬಹಳ ಚಿಕ್ಕವಯಸ್ಸಿನಲ್ಲೇ ಆ ಹೆಗ್ಗಳಿಕೆಗೆ ಪಾತ್ರರಾದರು. ‘ಬೆಟ್ಟದ ಹೂವು’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜಕುಮಾರ್ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಬಾಲನಟರೆನಿಸಿಕೊಂಡರು. ಬರೀ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ರಾಜ್ಯಮಟ್ಟದಲ್ಲೂ ಅವರು ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪುನೀತ್ ತಮ್ಮ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಪಡೆದಿರುವ ನಾಲ್ಕು ಪ್ರಶಸ್ತಿಗಳ ಪೈಕಿ, ಎರಡು ಪ್ರಶಸ್ತಿಗಳು ಬಾಲನಟನಾಗಿ ಪಡೆದಿದ್ದಾರೆ. “ಚಲಿಸುವ ಮೋಡಗಳು’ ಮತ್ತು ‘ಎರಡು ನಕ್ಷತ್ರಗಳು’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪುನೀತ್ ಎರಡು ಬಾರಿ ಬಾಲನಟ ಪ್ರಶಸ್ತಿ ಪಡೆದರೆ, ‘ಮಿಲನ’ ಮತ್ತು “ಜಾಕಿ’ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇದಲ್ಲದೆ, ಹಲವು ಖಾಸಗೀ ಪ್ರಶಸ್ತಿಗಳು, ಪುನೀತ್ ಅವರ ಅತ್ಯುತ್ತಮ ಅಭಿನಯಕ್ಕೆ ಸಂದಿವೆ.
ಬಾಲನಟನಾಗಿ ನಟಿಸಿದ್ದ ಪುನೀತ್, ನಾಯಕನಾಗಿ ಎಂಟ್ರಿ ಕೊಡುತ್ತಾರೆ ಎಂಬ ಮಾತು 2000ದಿಂದಲೇ ಕೇಳಿಬಂದಿತ್ತು. ಅದು ನಿಜವಾಗಿದ್ದು 2001ರಲ್ಲಿ. 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಫುಲ್ಪ್ಲೆಡ್ಜ್ ಹೀರೋ ಆಗಿ ಹೊರ ಹೊಮ್ಮಿದರು. ಈ ಚಿತ್ರ ಬಿಡುಗಡೆಯಾಗಿದ್ದು 2002ರಲ್ಲಿ. ಅಲ್ಲಿಯವರೆಗೂ ಅವರನ್ನು ಮನೆಯಲ್ಲಿ ಮಾತ್ರ ಪ್ರೀತಿಯಿಂದ ಅಪ್ಪಿ ಎಂದು ಕರೆಯಲಾಗುತ್ತಿತ್ತು. ಆ ನಂತರ ಅವರು ಕನ್ನಡಿಗರ ಪ್ರೀತಿಯ ಅಪ್ಪುವಾದರು ಎಂಬುದು ವಿಶೇಷ. ಪುನೀತ್ ರಾಜಕುಮಾರ್ ನಾಯಕನಾಗಿ ಎಂಟ್ರಿ ಕೊಡುತ್ತಾರೆ ಎಂದಾಗ, ಸಹಜವಾಗಿಯೇ ಕುತೂಹಲ ಮತ್ತು ನಿರೀಕ್ಷೆ ಜಾಸ್ತಿ ಇತ್ತು. ಏಕೆಂದರೆ, ಅಷ್ಟರಲ್ಲಾಗಲೇ ರಾಜಕುಮಾರ್ ಅವರ ಇಬ್ಬರು ಪುತ್ರರು ಚಿತ್ರರಂಗಕ್ಕೆ ಬಂದು ದೊಡ್ಡ ಹೆಸರು ಮಾಡಿದ್ದರು. ಪುನೀತ್ ಏನು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಈ ಚಿತ್ರ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, 25 ವಾರಗಳ ಪ್ರದರ್ಶನವನ್ನೂ ಕಂಡಿತು. ಈ ಚಿತ್ರದ ಸಮಾರಂಭವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು ಮತ್ತು ಈ ಸಮಾರಂಭಕ್ಕೆ ರಜನಿಕಾಂತ್ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದು ವಿಶೇಷ.
ಪುನೀತ್ ಶಾಲೆ ಮೆಟ್ಟಿಲು ಹತ್ತಿದವರಲ್ಲ! ಅಚ್ಚರಿ ಮೂಡಿಸುತ್ತೆ ಈ ವಿಷ್ಯ
ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…
ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!