ಬೆಂಗಳೂರು: ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ 18 ವರ್ಷದ ಯುವಕನೊಬ್ಬನಿಗೆ ಎಲೆಕ್ಟ್ರಾನಿಸಿಟಿಯಲ್ಲಿ ವೈದ್ಯರು ಕೊಟ್ಟ ಇಂಜೆಕ್ಷನ್ನಿಂದ ಕಾಲನ್ನೇ ಕತ್ತರಿಸುವ ಹಂತಕ್ಕೆ ಸೋಂಕು ತಗುಲಿದೆ!
ಎಲೆಕ್ಟ್ರಾನಿಕ್ಸಿಟಿ ಬಿಜಿ ರಸ್ತೆಯ ಶಶಿಕಲಾ ಅವರ ಮಗ ಅಭಿ ಎಂಬಾತನ ಕಾಲಿಗೆ ಸೋಂಕು ತಗುಲಿದೆ. ತಾಯಿ ಶಶಿಕಲಾ ಕೊಟ್ಟ ದೂರಿನ ಆಧಾರದ ಮೇಲೆ ವೈದ್ಯರಾದ ಡಾ.ಅಶೋಕ್ ಮತ್ತು ಕ್ಲಿನಿಕ್ ಮಾಲೀಕ ಆರೋಗ್ಯಸ್ವಾಮಿ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಷ್ಟಕ್ಕೂ ಏನಾಯ್ತು ಅಭಿಗೆ? ಇಲ್ಲಿದೆ ತಾಯಿ ಕೊಟ್ಟ ದೂರಿನ ವಿವರ.
ಶಶಿಕಲಾ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಮಗ ಅಭಿ (18) ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜ.6ರಂದು ಚಿಕಿತ್ಸೆ ಕೊಡಿಸಲೆಂದು ಬೇಗೂರಿನ ಮೈಲಸಂದ್ರದಲ್ಲಿರುವ ಕ್ಲಿನಿಕ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಡಾ.ಅಶೋಕ್ ಅವರು ಅಭಿಗೆ ಇಂಜೆಕ್ಷನ್ ನೀಡಿದ್ದರು. ಇದಾದ ಬಳಿಕ ಅಭಿ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಇಂಜೆಕ್ಷನ್ ನೀಡಿದ ಜಾಗದಿಂದ ಇಡೀ ಕಾಲಿಗೆ ಸೋಂಕು ಹರಡಿ ಇನ್ಫೆಕ್ಷನ್ ಆಗಿದೆ.
ಹೀಗಾಗಿ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ನಾವೆ ಸೋಂಕಿಗೆ ಚಿಕಿತ್ಸೆ ನೀಡುವುದಾಗಿ ಕ್ಲಿನಿಕ್ ಮಾಲೀಕ ಆರೋಗ್ಯಸ್ವಾಮಿ ಹೇಳಿದ್ದರು. ನಂತರ ಜಿಗಣಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಕೊಡಿಸಿದ್ದರು. ಇದೀಗ ತಮ್ಮಿಂದ ಚಿಕಿತ್ಸೆ ಕೊಡಿಸಲು ಆಗಲ್ಲ ಎಂದು ಕ್ಲಿನಿಕ್ನವರು ತಗಾದೆ ತೆಗೆದಿದ್ದಾರೆ. ಸದ್ಯ ಕಾಲು ಕತ್ತರಿಸುವ ಹಂತಕ್ಕೆ ಸೋಂಕು ಹರಡಿಕೊಂಡಿದೆ. ವೈದ್ಯರ ಎಡವಟ್ಟಿನಿಂದ ಅಭಿ ತನ್ನ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾನೆ ಎಂದು ಅಳಲುತೋಡಿಕೊಂಡ ಅಭಿ ತಾಯಿ ಶಶಿಕಲಾ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವೈದ್ಯರು ಮಾಡಿದ ತಪ್ಪಿನಿಂದಲೇ ಯುವಕನ ಕಾಲಿಗೆ ಇನ್ಫೆಕ್ಷನ್ ಆಗಿದೆಯೇ? ಅಥವಾ ಬೇರೆ ಏನಾದರೂ ಕಾರಣ ಇದಬಹುದೇ? ಎಂಬ ಬಗ್ಗೆ ತಜ್ಞ ವೈದ್ಯರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.