ಯಲಬುರ್ಗಾ: ಕಣ್ಣು ಮಾನವನ ಅತಿ ಸೂಕ್ಷ್ಮವಾದ ಅಂಗ. ಅವುಗಳ ಆರೋಗ್ಯದ ಕಡಗೆ ಹೆಚ್ಚು ಗಮನಹರಿಸಬೇಕು ಎಂದು ವೈದ್ಯ ಸಿದ್ದರಾಮಯ್ಯ ವಸ್ತ್ರದ ಹೇಳಿದರು.
ತಾಲೂಕಿನ ಬುಡಕುಂಟಿ ಗ್ರಾಮದ ಈಶ್ವರ ದೇವಸ್ಥಾನದ ಆವರಣದಲ್ಲಿ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಉಚಿನ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಿಕೊಳ್ಳುವುದು ಕರ್ತವ್ಯವಾಗಿದೆ ಎಂದರು.
ಹುಟ್ಟಿನಿಂದಲೇ ದೃಷ್ಠಿಯನ್ನು ಕಳೆದುಕೊಂಡವರು ಜಗತ್ತು ನೋಡುವ ಭಾಗ್ಯದಿಂದ ವಂಚಿತರಾಗಿರುತ್ತಾರೆ. ಆದರೆ ಬಹಳಷ್ಟು ಜನ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡಿದ್ದಾರೆ. ಹಾಗಾಗಿ ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯ ಎಂದು ಹೇಳಿದರು.
ವೈದ್ಯ ಬಸಯ್ಯ ವಸ್ತ್ರದ ಮಾತನಾಡಿದರು. ಇದೇ ವೇಳೆ 150ಕ್ಕೂ ಹೆಚ್ಚು ಜನ ಕಣ್ಣಿನ ತಪಾಸಣೆಗೆ ಒಳಗಾದರು. ಪ್ರಮುಖರಾದ ಕಾವೇರಿ ಬೆಲ್ಲದ, ಅಮರೇಶ ಬುರಡಿ, ಶಿವಪುತ್ರಪ್ಪ ವನಜಭಾವಿ ಇತರರಿದ್ದರು.