ಬೆಂಗಳೂರು: ಕರೊನಾ ಸೋಂಕಿನಿಂದ ಮನುಕುಲವೇ ಬೆಚ್ಚಿಬೀಳುವಂತಾಗಿದೆ. ಆದರೆ, ವಂಚಕರು ಮಾತ್ರ ಇದನ್ನೇ ಬಂಡವಾಳ ಮಾಡಿಕೊಂಡು ಸಂಕಷ್ಟದಲ್ಲಿ ಇರುವರಿಗೆ ಸಹಾಯ ಮಾಡುವ ನೆಪದಲ್ಲಿ ಹಣ ಪಡೆದು ವಂಚನೆಗೆ ಇಳಿದಿದ್ದಾರೆ. ಐಸಿಯು ಬೆಡ್ ಕೊಡಿಸುವ ಸೋಗಿನಲ್ಲಿ 20 ಸಾವಿರ ರೂ. ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರದ ಮನೀಷ್ ಸರ್ಕಾರ್ ಬಂಧಿತ. ಪಶ್ಚಿಮ ಬಂಗಾಳ ಮೂಲದ ಮನೀಷ್, ಮಲ್ಲೇಶ್ವರದಲ್ಲಿ ಹೌಸ್ಕೀಪಿಂಗ್ ಏಜೆನ್ಸಿ ನಡೆಸುತ್ತಿದ್ದಾನೆ. ಕರೊನಾ ಸೋಂಕಿಗೆ ಒಳಗಾಗಿರುವ ರೋಗಿಗಳನ್ನೇ ಟಾರ್ಗೆಟ್ ಮಾಡಿದ್ದ ಮನೀಷ್, ತುರ್ತಾಗಿ ಐಸಿಯು ಬೆಡ್, ಆಮ್ಲಜನಕ ಕೊಡಿಸುವುದಾಗಿ ಸಂದೇಶ ಸಿದ್ಧಪಡಿಸಿ ಅದರಲ್ಲಿ ತನ್ನ ಮೊಬೈಲ್ ನಂಬರ್ ನಮೂದಿಸಿ ಎಲ್ಲ ವಾಟ್ಸ್ಆ್ಯಪ್ ಗ್ರೂಪ್ಗೆ ರವಾನೆ ಮಾಡಿದ್ದ.
ವಾಟ್ಸ್ಆ್ಯಪ್ ಸಂದೇಶದಲ್ಲಿದ್ದ ನಂಬರ್ಗೆ ನೊಂದ ವ್ಯಕ್ತಿ ಕರೆ ಮಾಡಿ ತನ್ನ ತಾಯಿಗೆ ಐಸಿಯು ಬೆಡ್ ಬೇಕೆಂದು ಮನವಿ ಮಾಡಿದ್ದರು. ಆಗ ಮನೀಷ್ ಸರ್ಕಾರ್, ಕೊಡಿಸುತ್ತೇನೆ. ಆದರೆ, ಮುಂಗಡವಾಗಿ 20 ಸಾವಿರ ರೂ. ಶುಲ್ಕ ಪಾವತಿ ಮಾಡಬೇಕು. ಇಲ್ಲವಾದರೆ ಬೆಡ್ ಸಿಗುವುದಿಲ್ಲ ಎಂದು ಹೇಳಿದ್ದ. ತಾಯಿಯ ಆರೋಗ್ಯ ತೀವ್ರ ಹದಗೆಟ್ಟ ಕಾರಣ ನೊಂದ ವ್ಯಕ್ತಿ, ಗೂಗಲ್ ಪೇನಲ್ಲಿ ಆರೋಪಿ ಬ್ಯಾಂಕ್ ಖಾತೆಗೆ 20 ಸಾವಿರ ರೂ. ಜಮೆ ಮಾಡಿದ್ದರು. ಹಣ ಬಂದ ಕೂಡಲೇ ಆರೋಪಿ, ನೊಂದ ವ್ಯಕ್ತಿಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದ.
ಇತ್ತ ಹಣ ಕೊಟ್ಟು ಬೆಡ್ಗಾಗಿ ಕಾಯುತ್ತಿದ್ದ ನೊಂದ ವ್ಯಕ್ತಿಯ ತಾಯಿ ಸೂಕ್ತ ಚಿಕಿತ್ಸೆ ಸಿಗದೆ ಏಪ್ರಿಲ್ 24ರಂದು ಮೃತಪಟ್ಟಿದ್ದರು. ಮಾರನೇ ದಿನವೇ ತಂದೆ ಅಸುನೀಗಿದ್ದರು. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ವ್ಯಕ್ತಿ, ಕೊನೆಗೆ ತನಗೆ ಆಗಿರುವ ಮೋಸ ಮತ್ತ್ಯಾರಿಗೂ ಆಗಬಾರದು ಎಂದು ಜಯನಗರ ಠಾಣೆಗೆ ಬುಧವಾರ ದೂರು ನೀಡಿದ್ದರು. ತಕ್ಷಣ ಮೊಬೈಲ್ ನಂಬರ್ ಆಧರಿಸಿ ಆರೋಪಿ ಮನೀಷ್ ಸರ್ಕಾರ್ನನ್ನು ಬಂಧಿಸಲಾಗಿದೆ. ಕೋರ್ಟ್ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗವುದು ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಅಪರಿಚಿತರ ಬಗ್ಗೆ ಎಚ್ಚರ ಇರಲಿ: ಕರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಬಿಬಿಎಂಪಿ ಮತ್ತು ಕೋವಿಡ್-19 ಸಹಾಯವಾಣಿ ತೆರೆಯಲಾಗಿದೆ. ವಿಶೇಷ ಸಾಫ್ಟ್ವೇರ್ ಸಿದ್ಧಪಡಿಸಿದ್ದು, ಆನ್ಲೈನ್ನಲ್ಲಿ ರೋಗಿ ವಿವರ ನೋಂದಣಿ ಮಾಡಿದರೆ ತುರ್ತು ಚಿಕಿತ್ಸೆ ಯಾರಿಗೆ ಅಗತ್ಯವಿದೆ ಎಂದು ಗಮನಿಸಿ ಅಂತಹವರಿಗೆ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಬಡವರು ಮತ್ತು ಶ್ರೀಮಂತರು ಎಂದು ತಾರತಮ್ಯ ಮಾಡುತ್ತಿಲ್ಲ. ಅದಕ್ಕಾಗಿ ಪ್ರತಿಯೊಬ್ಬರು ಸರ್ಕಾರದ ವ್ಯವಸ್ಥೆಯಲ್ಲಿಯೇ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ವಾಟ್ಸ್ಆ್ಯಪ್, ಜಾಲತಾಣಗಳಲ್ಲಿ ಸಿಗುವ ಅಪರಿಚಿತ ವ್ಯಕ್ತಿಗಳು, ಎನ್ಜಿಒ, ಸಂಘ-ಸಂಸ್ಥೆಗಳ ನಂಬರ್ಗೆ ಕರೆ ಮಾಡಿ ಹಣ ಕೊಟ್ಟು ಮೋಸಕ್ಕೆ ಒಳಗಾಗಬೇಡಿ. ಒಂದು ವೇಳೆ ಐಸಿಯು ಬೆಡ್, ಅಮ್ಲಜನಕ, ರೆಮ್ಡಿಸಿವಿರ್ ಚುಚ್ಚುಮದ್ದು ಕೊಡುವುದಾಗಿ ಹೇಳಿ ಹಣ ಕೇಳಿದರೆ ಅಂತಹವರ ವಿರುದ್ಧ ಪೊಲೀಸ್ ಸಹಾಯವಾಣಿ 112ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ದೂರು ಬಂದ 15 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕ ಬರುತ್ತಾರೆ. ಮಧ್ಯವರ್ತಿಗಳಿಗೆ ಮತ್ತು ಅಪರಿಚಿತರಿಗೆ ಹಣ ಕೊಟ್ಟು ಮೋಸಕ್ಕೆ ಒಳಗಾಗಬೇಡಿ ಎಂದು ಹರೀಶ್ ಪಾಂಡೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
ಐಸಿಯು ಬೆಡ್, ಅಜ್ಲಜನಕ ಕೊಡಿಸುವ ನೆಪದಲ್ಲಿ ಏಜೆಂಟ್ಗಳು ಹಣ ಕೇಳಿದರೆ ಪೊಲೀಸ್ ಸಹಾಯವಾಣಿ 112ಗೆ ಅಥವಾ ಹತ್ತಿರದ ಠಾಣೆಗೆ ಕರೆ ಮಾಡಿ. ದೂರು ಬಂದ 15 ನಿಮಿಷಕ್ಕೆ ಪೊಲೀಸರು ಬರುತ್ತಾರೆ.
| ಹರೀಶ್ ಪಾಂಡೆ ದಕ್ಷಿಣ ವಿಭಾಗ ಡಿಸಿಪಿ
ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ
ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ
ಕಾರಿನಲ್ಲೇ ಟಿವಿ ಸೀರಿಯಲ್ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ