ಬೆಂಗಳೂರು: ನೆರೆಮನೆಯವರ ಜತೆಗಿನ ಜಗಳಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ್ನು ಠಾಣೆಗೆ ಕರೆತಂದು ದೌರ್ಜನ್ಯವೆಸಗಿದ ಆರೋಪ ಹೊತ್ತ ಬ್ಯಾಟರಾಯನಪುರ ಠಾಣೆ ಸಬ್ ಇನ್ಸ್ಪೆಕ್ಟರ್ ಹರೀಶ್ ವಿರುದ್ಧ ಮತ್ತೊಂದು ಸ್ಫೋಟಕ ವಿಷಯ ವೈರಲ್ ಆಗಿದೆ. ಮುಖ್ಯಪೇದೆಯೊಬ್ಬರ ಕೈಯಲ್ಲಿ ಎಸ್ಐ ಹರೀಶ್, ಪದೇಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರಂತೆ!
ಇತ್ತೀಚಿಗೆ ನೆರೆಮನೆಯವರ ಜತೆಗಿನ ಜಗಳ ಪ್ರಕರಣ ಸಂಬಂಧ ತೌಸೀಫ್ ಪಾಷಾ ಎಂಬಾತನ್ನು ವಶಕ್ಕೆ ಪಡೆದಿದ್ದ ಎಸ್ಐ ಹರೀಶ್, ಠಾಣೆಗೆ ಕರೆತಂದು ಎಫ್ಐಆರ್ ದಾಖಲಿಸದೆ ಮನಸೋ ಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್ಗೆ ಮೂತ್ರ ತುಂಬಿ ಕೊಟ್ಟಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಟ್ವಿಟರ್ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಸಂಜೀವ ಪಾಟೀಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯಗೆ ಸೂಚಿಸಿದ್ದರು. ತೌಸೀಫ್ ಹಾಗೂ ಎಸ್ಐ ಹರೀಶ್ ಅವರನ್ನು ವಿಚಾರಣೆ ನಡೆಸಿರುವ ಎಸಿಪಿ, ತನಿಖೆ ಮುಕ್ತಾಯಗೊಳಿಸಿದ್ದು, ಇಂದು(ಸೋಮವಾರ) ಡಿಸಿಪಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಪಿಎಸೈ ಹರೀಶ್, ಹೆಡ್ಕಾನ್ಸ್ಟೇಬಲ್ ಬಳಿ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರು ಎಂಬ ಆಡಿಯೋ ವೈರಲ್ ಆಗಿದೆ.
ಬ್ಯಾಟರಾಯನಪುರ ಹೊಯ್ಸಳ ಬೀಟ್ನಲ್ಲಿದ್ದ ಮುಖ್ಯಪೇದೆ ಮಂಜು ಕರ್ತವ್ಯದ ವೇಳೆ ಕುಡಿದಿದ್ದರು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರನ್ನು ಎಸ್ಐ ಹರೀಶ್ ಸಸ್ಪೆಂಡ್ ಮಾಡಿಸಿದ್ದರು. ಸಸ್ಪೆಂಡ್ ರಿವೋಕ್ ಆಗದೆ ನೊಂದಿರುವ ಮಂಜು, ಮತ್ತಷ್ಟು ಕುಡಿತ ಚಟ ಅಂಟಿಸಿಕೊಂಡಿದ್ದು, ಖಿನ್ನತೆಗೆ ಜಾರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್ಐ ಹರೀಶ್ ಕುರಿತು ಮಂಜು ಮಾತನಾಡಿರುವ ಆಡಿಯೋ ‘ದಿಗ್ವಿಜಯ ನ್ಯೂಸ್’ ಗೆ ಲಭ್ಯವಾಗಿದೆ. ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ಅನ್ನು ಹರೀಶ್ ಪದೇಪದೆ ತರಿಸಿಕೊಳ್ಳುತ್ತಿದ್ದರು ಎಂದು ಆಡಿಯೋದಲ್ಲಿ ಇದೆ. (ದಿಗ್ವಿಜಯ ನ್ಯೂಸ್)
ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ
ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ