ಬೆಂಗಳೂರು: ಪುಲಿಕೇಶಿನಗರ ಸಂಚಾರ ಠಾಣೆ ಮುಖ್ಯಪೇದೆಗೆ ಕರೊನಾ ಸೋಂಕು ತಗುಲಿರುವುದು ಪತ್ತೆಯಾದ ಬೆನ್ನಲ್ಲೇ, ಈಗ ಚಾಮರಾಜಪೇಟೆ ಪೊಲೀಸ್ ಠಾಣೆಯ ಪೇದೆಗೂ ಕರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಪೇದೆಗೆ ಕರೊನಾ ಸೋಂಕು ದೃಢಪಟ್ಟ ಬಳಿಕ ಚಾಮರಾಜಪೇಟೆ ಪೊಲೀಸ್ ಠಾಣೆಯನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಗಿದೆ. ಪೇದೆ ಜತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ 10 ಮಂದಿ ಪೊಲೀಸರನ್ನು ಗುರುತಿಸಲಾಗಿದೆ. ಇವರೆಲ್ಲರಿಗೂ ಕರೋನಾ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗಿದೆ.
ಇದನ್ನೂ ಓದಿ 3 ವಾರಗಳಲ್ಲಿ 4446 ಕೋಟಿ ರೂ. ಪಾವತಿಸಲು ಕೋರ್ಟ್ ಆದೇಶ: ಯಾರಿಗೆ, ಏಕೆ?
ಆದರೆ ಪೇದೆಯ ಪತ್ನಿಯನ್ನು ಕ್ವಾರಂಟೈನ್ಗೆ ಒಳಪಡಿಸಿಲ್ಲ. ಯಾಕೆಂದರೆ ಗರ್ಭಿಣಿ ಪತ್ನಿಯನ್ನು ಒಂದು ತಿಂಗಳ ಹಿಂದೆಯೇ ಈ ಪೇದೆ ಊರಿಗೆ ಕಳುಹಿಸಿದ್ದರು. ಹಾಗಾಗಿ ಅವರು ಕ್ವಾರಂಟೈನ್ನಿಂದ ಬಚಾವಾಗಿದ್ದಾರೆ. ಪೇದೆ ನೆಲೆಸಿದ್ದ ಮನೆ, ಸುತ್ತಮುತ್ತಲಿನ ನಿವಾಸಿಗಳ ಮನೆ ಹಾಗೂ ರಸ್ತೆಗಳಲ್ಲಿ ರಾಸಾಯನಿಕ ಸಿಂಪಡಿಸಲಾಗಿದೆ. ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
ಕಳೆದ ಎರಡು ದಿನದಲ್ಲಿ ಬೆಂಗಳೂರಿನಲ್ಲೇ ಇಬ್ಬರು ಪೇದೆಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದು ಇಲಾಖೆಯ ಕರ್ತವ್ಯನಿರತ ಪೊಲೀಸರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಸುರಕ್ಷತೆಗೆ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ ಕ್ವಾರಂಟೈನ್ನಲ್ಲಿ ಇದ್ದರೂ ನಿಲ್ಲದ ಕಾಮುಕರ ಅಟ್ಟಹಾಸ, ಮುಚ್ಚಿಹಾಕಲು ರಾಜಕೀಯ ಒತ್ತಡ
ಕಂಟೇನ್ಮೆಂಟ್ ವಲಯ, ಚೆಕ್ಪೋಸ್ಟ್, ಆಸ್ಪತ್ರೆ ಹಾಗೂ ಮತ್ತಿತರ ಸೂಕ್ಷ್ಮ ವಲಯಗಳಲ್ಲಿ ಬಂದೋಬಸ್ತ್ ಡ್ಯೂಟಿಗೆ ನಿಯೋಜನೆಯಾಗಿರುವ ಪೊಲೀಸರಿಗೆ ಈವರೆಗೂ ಪಿಪಿಇ ಕಿಟ್ ವಿತರಿಸಿಲ್ಲ. ಅಲ್ಲದೆ, ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಳಹಂತದ ಪೊಲೀಸ್ ಸಿಬ್ಬಂದಿ ವಲಯದಿಂದ ಆರೋಪ ಕೇಳಿಬಂದಿದೆ.