ಸಾಲಿಗ್ರಾಮ: ತಾಲೂಕಿನ ಹೊಸಕೋಟೆ ಕೊಪ್ಪಲು ಸಮೀಪದ ಅರಣ್ಯದಲ್ಲಿ ಬುಧವಾರ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಹುಣಸೂರು ತಾಲೂಕಿನ ಹರವೆ ಗ್ರಾಮದ ಎಚ್.ಸಿ.ಹರೀಶ್ (40) ಎಂಬುವರ ಶವ ಪತ್ತೆಯಾಗಿದ್ದು, ಈ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಎಚ್.ಸಿ.ಹರೀಶ್ ಚಿಲ್ಲರೆ ಅಂಗಡಿ ನಡೆಸುತ್ತಿದ್ದು, ಮಂಗಳವಾರ ರಾತ್ರಿ ಅಂಗಡಿ ಬಾಗಿಲು ಹಾಕಿ ಹರವೆ ಗ್ರಾಮಕ್ಕೆ ತೆರಳಿದ್ದರು. ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಮನೆಯವರು ರಾತ್ರಿಯಿಡೀ ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಇದೀಗ ಏಕಾಏಕಿ ತಾಲೂಕಿನ ಕುಪ್ಪೆ ಫಾರೆಸ್ಟ್ ವ್ಯಾಪ್ತಿಯ ಮಳಲಿ-ಹೊಸಕೋಟೆ ರಸ್ತೆ ಪಕ್ಕದಲ್ಲಿ ಬಳಿ ಬೈಕ್ ಸಮೇತ ಅರ್ಧಂಬರ್ಧ ಸುಟ್ಟಿರುವ ಶವ ಪತ್ತೆಯಾಗಿದೆ. ವಿಷಯ ತಿಳಿದರೂ ತಡವಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾಲಿಗ್ರಾಮ ಪೊಲೀಸ್ ಠಾಣೆ ನಿರೀಕ್ಷ ಕೃಷ್ಣರಾಜು, ಸಿಬ್ಬಂದಿ ಚೇತನ್, ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.