ಬೆಂಗಳೂರು: ಪ್ರೀತಿಸಲು ಒಲ್ಲೆ ಎಂದ ಯುವತಿಗೆ ಭಗ್ನ ಪ್ರೇಮಿಯೊಬ್ಬ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಯುವತಿಯ ದೇಹ ಶೇ.40-50 ಸುಟ್ಟಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಮಗಳ ದಯನೀಯ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್ ಅಟ್ಟಹಾಸ ಮೆರೆದಿದ್ದಾನೆ. ನಾಗೇಶ್ 24 ವರ್ಷದ ಯುವತಿಯನ್ನ ಪ್ರೀತಿಸುತ್ತಿದ್ದ. ಮದುವೆ ಆಗುವಂತೆ ಪೀಡಿಸುತ್ತಿದ್ದ. ಆದರೆ ಯುವತಿ ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಬುಧವಾರ ಸಂಜೆ ಗಲಾಟೆ ನಡೆದಿತ್ತಂತೆ. ಕುಪಿತಗೊಂಡ ನಾಗೇಶ್ ಗುರುವಾರ ಬೆಳಗ್ಗೆ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಆ್ಯಸಿಡ್ ತೆಗೆದುಕೊಂಡು ಆಕೆಗಾಗಿ ಕಾಯುತ್ತಿದ್ದ. ಇದ್ಯಾವುದರ ಪರಿವೇ ಇಲ್ಲದ ಯುವತಿ, ಎಂದಿನಂತೆ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬಸ್ ನಿಲ್ದಾಣದತ್ತ ಬರುತ್ತಿದ್ದಂತೆ ಆಕೆ ಮೇಲೆ ಆ್ಯಸಿಡ್ ಎರಚಿದ್ದಾನೆ. ನೋವಲ್ಲಿ ನರಳಾಡುತ್ತಿದ್ದ ಆಕೆಯನ್ನು ಕೂಡಲೇ ಸ್ಥಳೀಯರು ಸಮೀಪದ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಗೇಶ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಆ್ಯಸಿಡ್ ದಾಳಿಗೆ ಒಳಗಾದ ಯುವತಿಯನ್ನು ಆಸ್ಪತ್ರೆಗೆ ಕರೆತಂದಾಗ ಬಿಪಿ ಲೋ ಇತ್ತು. ಕೂಡಲೇ ಚಿಕಿತ್ಸೆ ನೀಡಲಾಗಿದೆ, ಈಗ ಸ್ವಲ್ಪ ಪರವಾಗಿಲ್ಲ. ದೇಹವು ಶೇ.42-50ರಷ್ಟು ಸುಟ್ಟಿದೆ. ಯುವತಿಯ ಬೆನ್ನು, ಎದೆ, ತಲೆಯ ಹಿಂಭಾಗ ಹಾಗೂ ತೊಡೆ ಭಾಗ ಸುಟ್ಟಿದೆ. ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯ ಡಾ.ಕಾರ್ತಿಕ್ ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿ ನಾಗೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಎಸ್ಪಿಎಂ ಅವರನ್ನ ಮುಗಿಸಲು ಕಾಂಗ್ರೆಸ್ನವರೇ ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ರು: ದೇವೇಗೌಡ