ಎಚ್.ಡಿ.ಕೋಟೆ: ಮೈಮೇಲೆ ದೇವರು ಬರುತ್ತೆ ಎನ್ನುತ್ತಾ ಓಡಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾಳೆ.
ತಾಲೂಕಿನ ಬೂದನೂರು ಗ್ರಾಮದ ಆನಂದ ಎಂಬುವರ ಪತ್ನಿ ಭವಾನಿ ಕೊಲೆ ಮಾಡಿದಾಕೆ. ಭಾನುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿನಲ್ಲಿ ಮನೆಯಲ್ಲಿ ಗಂಡ ಇಲ್ಲದ ವೇಳೆ ಪುತ್ರನ ಮೇಲೆ ಮನಸೋಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾಳೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಾ ಮಗು ಚೀರಾಡುತ್ತಿತ್ತು. ಈ ಶಬ್ದಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ನೋಡಿ ಮಗುವಿನ ಸಂಬಂಧಿಕರಿಗೆ ಮಾಹಿತಿ ನೀಡಿ, ತುರ್ತು ವಾಹನದ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ.
ಮೈಮೇಲೆ ದೇವರು ಬರ್ತಿತ್ತು!: ನಾಲ್ಕು ವರ್ಷದ ಹಿಂದೆ ಬೂದನೂರು ಗ್ರಾಮದ ಆನಂದ ಕೆ.ಎಡತೊರೆ ಗ್ರಾಮದ ಭವಾನಿಯನ್ನು ವಿವಾಹವಾಗಿದ್ದರು. ಕೆ.ಎಡತೊರೆ ಗ್ರಾಮದ ಮಾವನ ಮನೆಯಲ್ಲಿ ಆನಂದ ಪತ್ನಿ ಹಾಗೂ 3 ವರ್ಷದ ಗಂಡು ಮಗುವಿನ ಜತೆ ವಾಸವಾಗಿದ್ದರು. ಭವಾನಿ ತನಗೆ ಪಟ್ಟಲದಮ್ಮ ದೇವತೆ ಮೈಮೇಲೆ ಬರುತ್ತಾಳೆ ಎಂದು ಮನೆಯಲ್ಲಿ ಹೇಳಿಕೊಂಡು ಮಾನಸಿಕ ಅಸ್ವಸ್ಥತೆಯ ರೀತಿ ನಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.
ಇಪ್ಪತ್ತು ದಿನಗಳ ಹಿಂದೆ ತಂದೆ ಜತೆ ಜಗಳ ಮಾಡಿಕೊಂಡ ಭವಾನಿ, ಪತಿ ಹಾಗೂ ಮಗುವಿನ ಜತೆ ಬೂದನೂರು ಗ್ರಾಮದಲ್ಲಿ ಬಂದು ನೆಲೆಸಿದ್ದಳು. ಕೆಲವು ದಿನಗಳು ಚೆನ್ನಾಗಿಯೇ ಇದ್ದ ಭವಾನಿ, ದೇವತೆ ಮೈಮೇಲೆ ಬಂದಿದ್ದಾಳೆ ಎಂದು ಮಗುವಿನ ಬಾಯಿಗೆ ಕುಂಕುಮ ಹಾಕಿ ತಿನ್ನುವಂತೆ ಒತ್ತಾಯಿಸುತ್ತಿದ್ದಳು. ಒಂದು ವಾರದ ಹಿಂದೆ ರಾತ್ರಿ ವೇಳೆ ಮಗುವಿನ ಕುತ್ತಿಗೆಗೆ ಟವಲ್ನಿಂದ ಬಿಗಿದು ಸಾಯಿಸಲು ಪ್ರಯತ್ನಿಸಿದ್ದಳು. ಗಂಡ ಹಾಗೂ ಇತರರು ಮಗುವನ್ನು ರಕ್ಷಿಸಿದ್ದರು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು. ಇದೀಗ ಮಗುವನ್ನ ಬರ್ಬರವಾಗಿ ಕೊಂದಿದ್ದಾಳೆ.
ಎಚ್.ಡಿ.ಕೋಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಭವಾನಿ ಪತ್ತೆಗೆ ಬಲೆ ಬೀಸಿದ್ದಾರೆ.
ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್ ಮನೆ! ಶಿವಮೊಗ್ಗದಲ್ಲಿ 150 ಜಾಕ್ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್
ಲೈಂಗಿಕತೆಗಾಗಿ ಪತ್ನಿಯರ ವಿನಿಮಯ! ಟೆಲಿಗ್ರಾಂ, ಮೆಸೆಂಜರ್ ಗ್ರೂಪ್ನಲ್ಲೇ ವ್ಯವಹಾರ… ಅಸಹ್ಯ ಹುಟ್ಟಿಸುತ್ತೆ ಇವರ ಕೃತ್ಯ