ಬೆಂಗಳೂರು: ಶುಕ್ರವಾರ ನಿಧನರಾದ ರವಿ ಬೆಳಗೆರೆ ಅವರು ಚಿತ್ರರಂಗದಲ್ಲಿ ಸಂಭಾಷಣೆಕಾರರಾಗಿ, ನಟರಾಗಿ ಗುರುತಿಸಿಕೊಂಡಿದ್ದರು. ಸಿನಿಮಾ ನಿರ್ದೇಶನ ಮಾಡಬೇಕೆಂಬ ಅವರ ಆಸೆಯಾಗಿತ್ತು ಮತ್ತು ಅವರೊಂದು ಚಿತ್ರವನ್ನೂ ಪ್ರಾರಂಭಿಸಿದ್ದರು. ಕಾರಣಾಂತರಗಳಿಂದ ಚಿತ್ರ ಮುಂದುವರೆಯಲಿಲ್ಲ.
ಇದನ್ನೂ ಓದಿ: ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ: ಬಿಗ್ಬಾಸ್ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟ ದೀಪಿಕಾ ದಾಸ್
ರವಿ ಬೆಳಗೆರೆ ಅವರಿಗೂ, ಚಿತ್ರರಂಗಕ್ಕೂ ಸುಮಾರು ಎರಡು ದಶಕಗಳ ನಂಟು. ‘ಹಾಯ್ ಬೆಂಗಳೂರು’ ಪತ್ರಿಕೆ ಕೆಲವೇ ತಿಂಗಳುಗಳ ಅಂತರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಸಂದರ್ಭದಲ್ಲಿ, ಅದೇ ಹೆಸರಿನ ಚಿತ್ರವೊಂದು ನಿರ್ಮಾಣವಾಗಿತ್ತು. ಈ ಚಿತ್ರದಲ್ಲಿ ಶಶಿಕುಮಾರ್, ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಆ ನಂತರ ‘ಎನ್ಕೌಂಟರ್ ದಯಾನಾಯಕ್’ ನಿರ್ಮಾಣವಾದ ಸಂದರ್ಭದಲ್ಲಿ, ಆ ಚಿತ್ರಕ್ಕೆ ಅವರು ಸಂಭಾಷಣೆ ರಚಿಸಿದ್ದರು. ಇದಾಗಿ ಒಂದೆರೆಡು ವರ್ಷಗಳಲ್ಲೇ ‘ಗಂಡ ಹೆಂಡತಿ’ ಚಿತ್ರದ ಮೂಲಕ ನಟರಾದರು. ಅದಾದ ಮೇಲೆ ‘ವಾರಸ್ದಾರ’ ಮತ್ತು ‘ಮಾದೇಶ’ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇದಲ್ಲದೆ ಕಿರುತೆರೆಯಲ್ಲಿ ಒಂದಿಷ್ಟು ಸಮಯ ಸಕ್ರಿಯವಾಗಿದ್ದ ಅವರು ಈಟಿವಿ ಕನ್ನಡ ಚಾನಲ್ಗಾಗಿ ‘ಕ್ರೈಂಡೈರಿ’ ಕಾರ್ಯಕ್ರಮವನ್ನು ರೂಪಿಸುತ್ತಿದ್ದರು. ಇದಲ್ಲದೆ ಹಳೆಯ ಚಿತ್ರಗೀತೆಗಳನ್ನು ನೆನಪಿಸುವಂತಹ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟಿದ್ದರು. ಜತೆಗೆ, ಟಿ.ಎನ್. ಸೀತಾರಾಂ ಅವರ ‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಉಪ್ಪಿ ರಿಟರ್ನ್ಸ್ – 50ನೇ ಚಿತ್ರದ ಮೂಲಕ ನಿರ್ದೇಶನಕ್ಕೆ
ಈ ಮಧ್ಯೆ, ರವಿ ಬೆಳಗೆರೆ ನಿರ್ದೇಶನಕ್ಕೆ ಕೈ ಹಾಕಿದರು. ‘ದುನಿಯಾ’ ವಿಜಯ್, ಹರಿಪ್ರಿಯಾ ಅಭಿನಯದ ‘ಮುಖ್ಯಮಂತ್ರಿ ಐ ಲವ್ ಯೂ’ ಎಂಬ ಚಿತ್ರವನ್ನು ಅವರು ಘೋಷಿಸಿದ್ದಷ್ಟೇ ಅಲ್ಲ, ಚಿತ್ರದ ಮುಹೂರ್ತ ಸಹ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನೆರವೇರಿತ್ತು. ಆದರೆ, ಈ ಚಿತ್ರವು ಕಾರಣಾಂತರಗಳಿಂದ ಮುಂದುವರೆಯದಿದ್ದರಿಂದ, ನಿರ್ದೇಶಕರಾಗಬೇಕೆಂಬ ರವಿ ಬೆಳಗೆರೆ ಅವರ ಕನಸು, ಕನಸಾಗಿಯೇ ಉಳಿಯಿತು.