ನವದೆಹಲಿ: ತಮ್ಮ ಗ್ರಾಮದಲ್ಲಿನ ಕೃಷಿ ಭೂಮಿಯನ್ನು ಕಬಳಿಸುವವರ ವಿರುದ್ಧ ಕಾನೂನು ಹೋರಾಟ ಸಾರಿದ್ದ ಮಾಹಿತಿಹಕ್ಕು ಕಾಯ್ದೆ ಕಾರ್ಯಕರ್ತ (ಆರ್ಟಿಐ) ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟಿದ್ದಾನೆ.
ದೆಹಲಿಯ ಆಲಿಪುರದ ಹಮೀದ್ಪುರ್ ಗ್ರಾಮದ ನಿವಾಸಿ ರಮೇಶ್ ಮಾನ್ ಹತನಾದ ಆರ್ಟಿಐ ಕಾರ್ಯಕರ್ತ. ಈತನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃಷಿ ಭೂಮಿಯನ್ನು ಕಬಳಿಸುವ ವಿಷಯವಾಗಿ ಮಾನ್ ಮತ್ತು ಹಮೀದ್ಪುರ ಗ್ರಾಮದ ಮತ್ತೊಬ್ಬ ಭೂಒಡೆಯನ ನಡುವೆ ವಿವಾದ ಏರ್ಪಟ್ಟಿತ್ತು. ಅಲ್ಲದೆ, ಮಾನ್ ಹಾಗೂ ಆ ವ್ಯಕ್ತಿ ಇಬ್ಬರೂ ಅಪರಾಧ ಹಿನ್ನೆಲೆಯುಳ್ಳವರು. ಹಣಸುಲಿಗೆ, ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ಇಬ್ಬರ ವಿರುದ್ಧವೂ ದಾಖಲಾಗಿದ್ದವು ಎನ್ನಲಾಗಿದೆ. ಆದರೆ, ಮಾನ್ ಕೆಲವರ್ಷಗಳಿಂದ ಆರ್ಟಿಐ ಕಾರ್ಯಕರ್ತನಾಗಿ ಬದಲಾಗಿದ್ದು, ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಪೊಲೀಸರ ಹತ್ಯೆಗೈದ ನನ್ನ ಮಗನನ್ನು ಹೊಡೆದುರುಳಿಸಿ- ಗ್ಯಾಂಗ್ಸ್ಟರ್ ದುಬೆಯ ಅಮ್ಮ
ಭೂಕಬಳಿಕೆಯ ವಿರುದ್ಧ ಮಾನ್ ದಾಖಲಿಸಿದ್ದ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಬಹುಶಃ ಈ ವಿಚಾರವಾಗಿ ಸಿಟ್ಟಿಗೆದ್ದ ಹಮೀದ್ಪುರದ ಮತ್ತೊಬ್ಬ ಭೂಒಡೆಯ ತನ್ನ ಸಹಚರರ ಜತೆಗೂಡಿ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತನ್ಮ ಮನೆಯ ಹೊರಗಿನ ಕಟ್ಟೆಯ ಮೇಲೆ ಮಾನ್ ಕುಳಿತಿದ್ದಾಗ ಎಸ್ಯುವಿಯಲ್ಲಿ ಬಂದ ಒಂದಷ್ಟು ಜನರು ಈತನ ವಿರುದ್ಧ ಅವಾಚ್ಯವಾಗಿ ನಿಂದಿಸಲಾರಂಭಿಸಿದರು. ಮೊದಮೊದಲು ನಿರ್ಲಕ್ಷಿಸಿದ ಮಾನ್ ಬಳಿಕ ಅವರ ಬಳಿ ಹೋಗಿ ಹಾಗೆ ಮಾಡದಂತೆ ಸೂಚಿಸಿದ. ಆಗ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕ ಹೋಯಿತು.
ಎಸ್ಯುವಿಯಲ್ಲಿ ಬಂದಿದ್ದವರು ದೊಣ್ಣೆ ಮತ್ತು ಕಬ್ಬಿಣ ರಾಡ್ನಿಂದ ಮಾನ್ ಮೇಲೆ ಮನಸೋಇಚ್ಛೆ ದಾಳಿ ಮಾಡಿದರು. ನೆರೆಹೊರೆಯವರು ಎಸ್ಯುವಿಯಲ್ಲಿ ಇದ್ದವರನ್ನು ಓಡಿಸಿದರಾದರೂ ಅಷ್ಟರಲ್ಲಿ ಮಾನ್ನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
3 ತಿಂಗಳಲ್ಲಿ 700 ಮಹಿಳಾ ದೌರ್ಜನ್ಯ ಕೇಸ್: ಶೇ.60 ಕೌಟುಂಬಿಕ ಕಲಹ ವಿಚಾರಣೆಗೆ ಕಾಡುತ್ತಿದೆ ಕರೊನಾ ಗ್ರಹಣ