ಚಿತ್ರದುರ್ಗ: ನಗರದ ಆಗರ್ಭ ಶ್ರೀಮಂತರೊಬ್ಬರ ಏಕೈಕ ಪುತ್ರ ಹಾರ್ದಿಕ್ ಕುಮಾರ್ ಜೈನ್ ಅವರು ಸರ್ವವನ್ನೂ ತ್ಯಜಿಸಿ ಸನ್ಯಾಸ ಜೀವನಕ್ಕೆ ಪಾದರ್ಪಣೆ ಮಾಡಲಿದ್ದಾರೆ.
ಜೈನ ಸಮುದಾಯಕ್ಕೆ ಸೇರಿದ ಹಾರ್ದಿಕ್ ಅವರ ವಯಸ್ಸು ಸದ್ಯ 20 ವರ್ಷ. ನಗರದ ಗುಮಾಸ್ತರ ಕಾಲನಿಯ ತಾರಾಚಂದ್ ಜೀ ಮೆಹತಾ-ಮಮತಾದೇವಿ ಪುತ್ರರಾದ ಇವರು ನಾಳೆ (ಜು.2) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿದ್ಧಾಚಲ ಸ್ಥೂಲಭದ್ರ ಧಾಮ ಸಿದ್ಧ ಕ್ಷೇತ್ರದಲ್ಲಿ ಜೈನ ಮುನಿ ಶ್ರೀ ಚಂದ್ರಯೇಶ್ ಗೂರೂಜಿ ಸಾನಿಧ್ಯದಲ್ಲಿ ಭಗವಾನ್ ಮಹಾವೀರರ ಅನುಯಾಯಿ ಆಗಿ ಜೈನ ದೀಕ್ಷೆ ಪಡೆಯಲಿದ್ದಾರೆ. ಇದನ್ನೂ ಓದಿರಿ ಎಲ್ಲೆಂದರಲ್ಲಿ ಪಿಪಿಇ ಕಿಟ್ ಬಿಸಾಡಿದ್ರೆ ಕಠಿಣ ಕ್ರಮ; ಶ್ರೀರಾಮುಲು
ಈ ಕಾರ್ಯಕ್ರಮದ ಅಂಗವಾಗಿ ಗುಮಾಸ್ತರ ಕಾಲನಿ ಅವರ ನಿವಾಸದಲ್ಲಿ ಸೋಮವಾರ ಪೂಜಾ ಕಾರ್ಯಕ್ರಮಗಳು ನಡೆದವು. ಕೋವಿಡ್-19 ಹಿನ್ನೆಲೆಯಲ್ಲಿ ದೀಕ್ಷಾ ಕಾರ್ಯಕ್ರಮ ಸರಳವಾಗಿ ನಡೆಯಲಿದೆ ಎಂದು ಜೈನ ಸಮುದಾಯದ ಮುಖಂಡ ತಾರಾಚಂದ್ ಜೀ ತಿಳಿಸಿದ್ದಾರೆ.
ದೀಕ್ಷೆ ಪೂರ್ವದಲ್ಲಿ ನಗರದ ಶ್ರೀ ಆದಿ ಕೀರ್ತೀಶ್ವರ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮ ಸಂದರ್ಭದಲ್ಲಿ ಹಾರ್ದಿಕ್ ಕುಮಾರ್ ಜೈನ್ ಅವರನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭೇಟಿ ಶುಭ ಕೋರಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಾದ್ವಿ ಶ್ರೀ ಶೀಲಧರ್ಮ ಶ್ರೀಜಿ ಮಾತನಾಡಿ, ಇಂದಿನ ದಿನಮಾನದಲ್ಲಿ ಧರ್ಮ ಪಾಲನೆ ಸರಿಯಾಗಿ ಆಗುತ್ತಿಲ್ಲ. ಯುವ ಜನತೆ ಧರ್ಮದೆಡೆ ನಿರಾಸಕ್ತವಾಗಿರುವ ಈ ಸಮಯದಲ್ಲಿ ಹಾರ್ದಿಕ್ ಅವರು ಸಂಸಾರ ತ್ಯಾಗಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಪೂಜ್ಯ ಸಾದ್ವಿ ಶ್ರೀ ಕೀರ್ತಿಯಶ ಶ್ರೀಜಿ, ಸಮುದಾಯದ ಮುಖಂಡರಾದ ಗುಮಾನ್ಮಲ್ ಗವಾಡಿ ಜೈನ್, ಪೃಥ್ವಿರಾಜ್ ಜೈನ್, ಪ್ರೇಮಚಂದ್ ಜೈನ್, ಹತ್ತಿಮಲ್, ಜಯಂತಿಲಾಲ್ ಚೋಪ್ರ ಮತ್ತಿತರರು ಇದ್ದರು. ಇದೇ ವೇಳೆ ಬಡವರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.