ನವದೆಹಲಿ: ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಸಂಜೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರೊಂದಿಗೆ ಕಾಂಗ್ರೆಸ್ನ ಒಟ್ಟು 22ಮಂದಿ ಶಾಸಕರೂ ರಾಜೀನಾಮೆ ಸಲ್ಲಿಸಿದ್ದು, ಮಧ್ಯಪ್ರದೇಶ ಸರ್ಕಾರದ ಸಂಖ್ಯಾಬಲ 92ಕ್ಕೆ ಇಳಿಳಿದು ಅಸ್ಥಿರಗೊಂಡಿದೆ.
ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ಪತ್ರದಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ನಲ್ಲೇ ಇದ್ದರೆ ನನ್ನ ಗುರಿ ಮುಟ್ಟಲು ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ತಮ್ಮನ್ನು ಕಡೆಗಣಿಸಿದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರ ಕಾಂಗ್ರೆಸ್ ತೊರೆಯುವ ನಿರ್ಧಾರದ ಬಗ್ಗೆ ಇಂದು ತ್ರಿಪುರ ಮಾಣಿಕ್ಯ ರಾಜವಂಶಸ್ಥ, ಸಿಂಧಿಯಾ ಅವರ ಸೋದರ ಸಂಬಂಧಿ ಪ್ರದ್ಯೋತ್ ಮಾಣಿಕ್ಯ ದೇವವರ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಸಿಂಧಿಯಾ ನಡೆಯನ್ನು ಸ್ವಾಗತಿಸಿದ್ದಾರೆ.
ಪ್ರದ್ಯೋತ್ ಮಾಣಿಕ್ಯ ಅವರೂ ಕೂಡ ಕಾಂಗ್ರೆಸ್ ತ್ರಿಪುರ ಮುಖ್ಯಸ್ಥರಾಗಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಿದ್ದವರು. ಈಗ ಸಿಂಧಿಯಾ ರಾಜೀನಾಮೆ ಬಗ್ಗೆ ಮಾತನಾಡಿದ ಅವರು, ಜ್ಯೋತಿರಾದಿತ್ಯ ಸಿಂಧಿಯಾ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಒಂದು ತಿಂಗಳು ಕಾದಿದ್ದಾರೆ. ಕೊನೆಗೂ ಅವರಿಗೆ ಅಪಾಯಿಂಟ್ಮೆಂಟ್ ಸಿಗಲಿಲ್ಲ. ಈ ಬಗ್ಗೆ ನನಗೆ ಗೊತ್ತು. ರಾಹುಲ್ ಗಾಂಧಿಯವರಿಗೆ ನಮ್ಮ ಮಾತನ್ನು ಕೇಳಲು ಸಾಧ್ಯವಿಲ್ಲ ಎಂದಮೇಲೆ ನಮ್ಮನ್ನು ಯಾಕೆ ಪಕ್ಷಕ್ಕೆ ಕರೆತರಬೇಕಿತ್ತು ಎಂದು ಹೇಳಿದ್ದಾರೆ.
ಅಲ್ಲದೆ, ಹೀಗೆ ನಮ್ಮ ಮಾತು, ಅಭಿಪ್ರಾಯಗಳಿಗೆ ಬೆಲೆ ಇಲ್ಲ ಎಂದು ಅರ್ಥವಾದರೆ ಒಬ್ಬರಾದ ಮೇಲೆ ಮತ್ತೊಬ್ಬರು ಪಕ್ಷ ತೊರೆಯುತ್ತಾರೆ ಎಂದು ತಿಳಿಸಿದ್ದಾರೆ.
ಅದಕ್ಕೂ ಮೊದಲು ಮಂಗಳವಾರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಪ್ರದ್ಯೋತ್ ದೇವವರ್ಮ, ನಾನು ಜ್ಯೋತಿರಾದಿತ್ಯ ಸಿಂಧಿಯಾ ಅವರ ಬಳಿ ಮಾತನಾಡಿದ್ದೇನೆ. ಆಗಲೂ ಅವರು ಅದನ್ನೇ ಹೇಳಿದರು. ಕಾದುಕಾದು ಸಾಕಾಗಿದೆ. ಇನ್ನೂ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿಲ್ಲ ಎಂದು ನನ್ನ ಬಳಿ ಬೇಸರ ಹೊರಹಾಕಿದ್ದರು ಎಂದು ಬರೆದುಕೊಂಡಿದ್ದರು.
ನಾನು ತ್ರಿಪುರ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೇ ಹೇಳಿದ್ದೆ. ಕಾಂಗ್ರೆಸ್ನಲ್ಲಿ ಯುವ ನಾಯಕರಿಗೆ ಅನಾಥ ಭಾವ ಕಾಡುತ್ತಿದೆ. ಅದರಲ್ಲೂ ರಾಹುಲ್ ಗಾಂಧಿಯವರು ಎಐಸಿಸಿ ಅಧ್ಯಕ್ಷನ ಸ್ಥಾನವನ್ನು ತೊರೆದ ನಂತರ ನಾವೆಲ್ಲರೂ ಇನ್ನೂ ಮೂಲೆಗುಂಪಾದೆವು. ನಮ್ಮ ವಿಚಾರಗಳೆಲ್ಲ ನಿರ್ಲಕ್ಷಿಸಲ್ಪಟ್ಟವು. ಪಕ್ಷದ ಧುರೀಣರು ಎನಿಸಿಕೊಂಡವರು ಪ್ರಮುಖ ವಿಚಾರಗಳಲ್ಲಿ ನಮ್ಮಂತಹ ಯುವ ನಾಯಕರ ಅಭಿಪ್ರಾಯಗಳನ್ನು, ನೀತಿಗಳನ್ನು ಕೇಳುವುದನ್ನು ಬಿಟ್ಟರು. ನಾವೇ ವ್ಯಕ್ತಪಡಿಸಿದರೂ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ ಎಂದು ಕಾಂಗ್ರೆಸ್ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪ್ರದ್ಯೋತ್ ಫೇಸ್ಬುಕ್ನಲ್ಲಿ ಬಿಚ್ಚಿಟ್ಟಿದ್ದಾರೆ.
2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಸಿಂಧಿಯಾ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ಕಮಲನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್, ಸಿಂಧಿಯಾ ಅವರನ್ನು ಪಶ್ಚಿಮ ಉತ್ತರಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನೂ ವಹಿಸಿಕೊಡಲಾಗಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸಿಂಧಿಯಾ ಅವರಿಗೆ ರಾಜ್ಯಸಭೆಯಲ್ಲಿ ಸ್ಪರ್ಧಿಸುವ ಆಸೆ ಇತ್ತಾದರೂ ಕಾಂಗ್ರೆಸ್ ಅದನ್ನು ಪೂರೈಸಿರಲಿಲ್ಲ. (ಏಜೆನ್ಸೀಸ್)
ಮಧ್ಯಪ್ರದೇಶದಲ್ಲಿ ಮತ್ತಿಬ್ಬರು ಶಾಸಕರಿಂದ ರಾಜೀನಾಮೆ: 22ಕ್ಕೆ ಏರಿತು ಕಾಂಗ್ರೆಸ್ಗೆ ಕೈ ಕೊಟ್ಟವರ ಸಂಖ್ಯೆ
ವಿಶ್ವಕ್ಕೆ ಅಂಟಿದ ಆತಂಕ ಕೊರೊನಾ; ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವರಿಗೂ ತಗುಲಿದೆ ಸೋಂಕು