ಗದಗ: ಬಡವರ ಪಾಲಾಗಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲಾಗುತ್ತಿದೆ. ಗೋದಾಮಿನಲ್ಲಿ ಅಕ್ರಮವಾಗಿ ಅಕ್ಕಿಯನ್ನು ಶೇಖರಿಸಲಾಗಿದೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿ ವಶಕ್ಕೆ ಪಡೆದ ಘಟನೆ ಗದಗ ಜಿಲ್ಲೆ ಬೆಟಗೇರಿಯ ನರಸಾಪುರ ಕೈಗಾರಿಕ ಪ್ರದೇಶದಲ್ಲಿ ನಡೆದಿದೆ.
ದಾಳಿ ವೇಳೆ 2 ಲಕ್ಷ 60 ಸಾವಿರ ರೂಪಾಯಿ ಮೌಲ್ಯದ 77 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಅಕ್ಕಿ ಶೇಖರಿಸಿರುವ ಕುರಿತು ಮಾಹಿತಿ ನೀಡಿದ್ದಕ್ಕೆ ಕುಪಿತಗೊಂಡ ದಂಧೆಕೋರರು ಅಧಿಕಾರಿಗಳ ಸಮ್ಮುಖದಲ್ಲೇ ಕನ್ನಡ ಪರ ಸಂಘಟನೆಯ ಸದಸ್ಯರಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಬೈಕ್ ಸವಾರ ಗಂಭೀರ ಗಾಯ
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಧಮ್ಕಿ ಹಾಕಿರುವ ಏಕನಾಥ್ ಹಾಗೂ ಗೋದಾಮಿನ ಮಾಲೀಕ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಧಂಧೆಕೋರರಿಬ್ಬರು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು. ಕನ್ನಡ ಪರ ಸಂಘಟನೆಯ ಸದಸ್ಯರಿಗೆ ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.