ಬೆಳಗಾವಿ: ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ನಟ ಕಿಚ್ಚ ಸುದೀಪ ಅವರು ಸೋಮವಾರ ಜಿಲ್ಲೆಯ ನೇಸರಗಿ, ಕಿತ್ತೂರು, ಯಮಕನಮರಡಿ ಹಾಗೂ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪರ ನಟ ಕಿಚ್ಚ ಸುದೀಪ ಅವರ ರೋಡ್ ಶೋ ಸಂಜೆ 5.30ಕ್ಕೆ ಶ್ರೀನಗರ ಉದ್ಯಾನದಿಂದ ಆರಂಭವಾಗಿ 2 ಕಿಮೀ ದೂರ ಸಾಗಿತು. ಬಳಿಕ ಸಂಚಾರ ದಟ್ಟಣೆ ಇತರ ಕಾರಣಗಳಿಂದ ರೋಡ್ ಶೋ ಮೊಟಕುಗೊಳಿಸಲಾಯಿತು. ಬಳಿಕ ಅಭ್ಯರ್ಥಿ ರವಿ ಪಾಟೀಲ ಮಹಾಂತೇಶ ನಗರದ
ಉದ್ಯಾನದಿಂದ ತೆರದ ವಾಹನದಲ್ಲಿ ಮತಯಾಚನೆ ಮಾಡಿದರು. ಶ್ರೀನಗರ ಉದ್ಯಾನ ಬಳಿ ನಟ ಸುದೀಪ ಅವರನ್ನು ನೋಡಲು ಎಲ್ಲೆಡೆ ಜನಸಾಗರವೇ ಹರಿದು ಬಂದಿತ್ತು. ಇದು ಬಿಜೆಪಿ ಅಭ್ಯರ್ಥಿಗಳ ವಿಶ್ವಾಸ ಇಮ್ಮಡಿಗೊಳಿಸಿತು. ರೋಡ್ ಶೋ ವೇಳೆ ರಸ್ತೆಯುದ್ದಕ್ಕೂ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೂ ಹಾರಿಸುತ್ತ ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತ ಸ್ವಾಗತಿಸಿದರು. ನಟ ಸುದೀಪ ಮಾತನಾಡಿ, ಮೇ 10ರಂದು ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು. ನುರಿತ ವೈದ್ಯ ಡಾ. ರವಿ ಪಾಟೀಲ ಸ್ಪರ್ಧಿಸಿದ್ದು, ಅವರಿಗೆ ನಿಮ್ಮ ಮತ ನೀಡಿ. ಚುನಾಯಿತಗೊಂಡ ಬಳಿಕ ಡಾ.ರವಿ ಪಾಟೀಲ ನಿಮ್ಮ ಕೆಲಸ ಮಾಡಿಕೊಡದಿದ್ದರೆ ಮಾಜಿ ಶಾಸಕ ಅನಿಲ ಬೆನಕೆ ಬಳಿ ಹೋಗಿ. ಅವರೂ ಸ್ಪಂದಿಸದಿದ್ದರೆ
ನನ್ನ ಹತ್ತಿರ ಬನ್ನಿ. ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಇತರರಿದ್ದರು.
ಉಸಿರೆ ಉಸಿರೇ ಹಾಡಿ ರಂಜಿಸಿದ ಕಿಚ್ಚ: ನಟ ಕಿಚ್ಚ ಸುದೀಪ ಅವರ ರೋಡ್ ಶೋ ವೇಳೆ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಕೂಗುತ್ತಿದ್ದರು. ಈ ವೇಳೆ ಕಿಚ್ಚ ಅಂತ ಹೊಗಳುತ್ತಿದ್ದಿರೋ ಅಥವಾ ಹುಚ್ಚಾ ಅಂತ ತೆಗಳುತ್ತಿದ್ದಿರೋ ಅಂತ ಸುದೀಪ ನಗೆ ಚಟಾಕಿ ಹಾರಿಸಿದರು. ಹಾಡು ಹಾಡುವಂತೆ ಎಂದು ಒತ್ತಾಯಿಸಿದರು.
ಉಸಿರೇ ಉಸಿರೇ ಹಾಡು ಹಾಡಿ ರಂಜಿಸಿದರು. ಮತ್ತೊಂದೆಡೆ ಕೆಸರಿ ಬಾವುಟ, ಕಿಚ್ಚ ಭಾವಚಿತ್ರ ಹಿಡಿದಿದ್ದ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಜನರು ಘೋಷಣೆ ಕೂಗಿದರು. ಸುದೀಪ್ ಜತೆ ಸೆಲ್ಫಿಗಾಗಿ, ಆಟೋಗ್ರಾಪ್ಗಾಗಿ ಯುವತಿಯರು, ಯುವಕರು ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂತು.
ನೆಚ್ಚಿನ ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು, ಅವರ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ. ನನ್ನ ನೋಡಲು, ಸೆಲ್ಫಿಗಾಗಿ, ಆಟೋಗ್ರಾಪ್ಗಾಗಿ ಬಂದಿದ್ದಾರೆ. ಅವರ ಈ ಅಭಿಮಾನ, ಪ್ರೀತಿ ನನ್ನನ್ನು ಪುನೀತನಾಗಿಸಿದೆ.
| ಕಿಚ್ಚ ಸುದೀಪ ನಟ