ತಿರುವನಂತಪುರ: ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಮಂಗಳವಾರ (ಅ.11) ಬಂಧಿಸಿದ್ದು, ಇದೀಗ ತನಿಖೆಯಲ್ಲಿ ಮತ್ತಷ್ಟು ಭಯಾನಕ ಸಂಗತಿಗಳು ಹೊರಬಿದ್ದಿವೆ.
ಆರ್ಥಿಕ ಏಳಿಗೆ ಸಾಧಿಸಲು ವಾಮಾಚಾರಕ್ಕೆ ಮಹಿಳೆಯರಿಬ್ಬರನ್ನು ಬಲಿ ಕೊಟ್ಟಿದ್ದಲ್ಲದೆ, ಆ ಮಹಿಳೆಯರ ಮೃತದೇಹವನ್ನು ತಿಂದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಖಚಿತವಾಗಿ ಹೇಳಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರ ಇಲ್ಲ ಎಂದಿರುವ ಕೊಚ್ಚಿ ನಗರ ಪೊಲೀಸ್ ಆಯ್ತುಕ್ತ ನಾಗರಾಜು ಚಕಿಲಂ, ವಿಧಿವಿಜ್ಞಾನ ಪರೀಕ್ಷೆ ಮತ್ತು ಸಾಕ್ಷ್ಯ ಸಂಗ್ರಹ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈ ಆಘಾತಕಾರಿ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ನಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳನ್ನು ಶಫಿ ಮತ್ತು ದಂಪತಿ ಭಗವಾಲ್ ಸಿಂಗ್ ಮತ್ತು ಲೈಲಾ ಎಂದು ಗುರುತಿಸಲಾಗಿದೆ. ನರಬಲಿ ಆಚರಣೆ ನಡೆಸಿದ ಮೂವರನ್ನು ನಾವು ಬಂಧಿಸಿದ್ದೇವೆ. ವಾಮಾಚಾರಕ್ಕಾಗಿ ಇಬ್ಬರು ಮಹಿಳೆಯರನ್ನು ಕೊಂದಿದ್ದಾರೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಮನೆಯೊಂದರಲ್ಲಿ ಸಮಾಧಿ ಮಾಡಲಾಗಿದ್ದ ಎರಡು ಛಿದ್ರಗೊಂಡ ಶವಗಳು ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಈ ಭಯಾನಕ ಮಾಹಿತಿ ಬಯಲಾಗಿದೆ. ಸಂತ್ರಸ್ತರನ್ನು ಪದ್ಮ ಮತ್ತು ರೊಸ್ಲಿ ಎಂದು ಗುರುತಿಸಲಾಗಿದೆ. ಇಬ್ಬರು ಸಹ ಲಾಟರಿ ಟಿಕೆಟ್ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕೊಲೆಯ ವಿಧಾನ ಹೇಳಲಾಗದಷ್ಟು ಭೀಕರ ಮತ್ತು ಕ್ರೂರವಾಗಿವೆ ಎಂದು ಪೊಲೀಸ್ ಕಮಿಷನರ್ ಹೇಳಿದರು.
ಪದ್ಮಂ ಮತ್ತು ರೋಸ್ಲಿಯನ್ನು ಕಟ್ಟಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಲ್ಲದೆ, ಅವರ ಮೃತದೇಹಗಳನ್ನು ಅನೇಕ ತುಂಡುಗಳನ್ನಾಗಿ ಮಾಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಹೊರಬರಲು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. ರೋಸ್ಲಿ ಕಳೆದ ಜೂನ್ನಲ್ಲಿ ನಾಪತ್ತೆಯಾದರೆ, ಪದ್ಮ ಸೆಪ್ಟೆಂಬರ್ನಲ್ಲಿ ಕಾಣೆಯಾಗಿದ್ದರು.
ಸಾಂಪ್ರದಾಯಿಕ ಮಸಾಜ್ ಥೆರಪಿಸ್ಟ್ ಆಗಿರುವ ಆರೋಪಿ ಭಗವಂತ್ ಸಿಂಗ್ ಮತ್ತು ಆತನ ಪತ್ನಿ ಲೈಲಾ, ವಿಚಾರಣೆಯ ಸಂದರ್ಭದಲ್ಲಿ ಬಲಿಯಾದ ಮಹಿಳೆಯರ ಮಾಂಸವನ್ನು ಸೇವಿಸಿರುವುದಾಗಿ ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ದಂಪತಿ ಮತ್ತು ಅವರ ಏಜೆಂಟ್ ಶಫಿಯನ್ನು ಅ.26ರವರೆಗೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಪದ್ಮ ನಾಪತ್ತೆ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಫೋನ್ಗಳು ಮುಹಮ್ಮದ್ ಶಫಿ ಬಳಿ ಪತ್ತೆಯಾಗಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪಹರಿಸಿದ್ದಾಗಿ ಆತ ಒಪ್ಪಿಕೊಂಡಿದ್ದ. ಬಳಿಕ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದಾಗ ಆರೋಪಿ ದಂಪತಿ ತಮ್ಮ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿದ ನಂತರ ಅಲ್ಲಿಯೇ ಹೂತ್ತಿರುವುದು ತಿಳಿದುಬಂದಿತು. ಇದು ಆರ್ಥಿಕ ಲಾಭಕ್ಕಾಗಿ ಧಾರ್ಮಿಕವಾಗಿ ನರಬಲಿಯಾಗಿದೆ. ಶಫಿ ಅವರ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಮೂವರನ್ನು ಸಹ ಬಂಧಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ನಿನ್ನೆಯೇ ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ಅವರು ಮಹಿಳೆಯರಿಬ್ಬರ ‘ನರಬಲಿ’ಯನ್ನು ಖಂಡಿಸಿದ್ದು, ಸಿಪಿಐ (ಎಂ) ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)
ನಮಗೇನಾದ್ರೂ ಆದ್ರೆ ಪೊಲೀಸ್ನವ್ರೇ ಕಾರಣ… ಒತ್ತುವರಿ ತೆರವು ವೇಳೆ ಪೆಟ್ರೋಲ್ ಸುರಿದುಕೊಂಡು ದಂಪತಿ ಹೈಡ್ರಾಮ
ಕಬ್ಬಿನ ಗದ್ದೆಗೆ ನುಗ್ಗಿದ ಬಸ್; ಅದೃಷ್ಟವಶಾತ್ 30ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರು