ದೊಡ್ಡಬಳ್ಳಾಪುರ: ರಾಜ್ಯರಾಜಧಾನಿಯಲ್ಲಿ ಮೇರೆ ಮೀರಿರುವ ಗಾಂಜಾ ಘಾಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸದ್ದು ಮಾಡುತ್ತಿದೆ. ಬೆಳ್ಳಂಬೆಳಗ್ಗೆಯೇ ಗಾಂಜಾ ನಶೆಯಲ್ಲಿ ತೇಲಾಡುವ ಪುಂಡರು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಾ, ಅಶಾಂತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಬುಧವಾರ ರಾತ್ರಿ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಗಾಂಜಾ ಅಮಲಿನಲ್ಲಿದ್ದ ಮೂವರು ಪುಂಡರು ಹೋಂಗಾರ್ಡ್ಗೆ ಬೈಕ್ನಲ್ಲಿ ಡಿಕ್ಕಿ ಹೊಡೆದು ಹಲ್ಲೆ ನಡೆಸಿದ್ದಾರೆ. ಜೊತೆಗೆ, ಅವರ ಬೈಕ್ ಕಸಿದುಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಪ್ರಕರಣದಿಂದ ಸ್ಥಳೀಯ ಜನರು ಬೆಚ್ಚಿ ಬಿದ್ದಿದ್ದಾರೆ.
ಸುಟ್ಟುಕರಕಲಾದ ಬೈಕ್: ತೂಬಗೆರೆ ಹೋಬಳಿಯ ಕಲ್ಲುಕೋಟೆ ಗ್ರಾಮದಲ್ಲಿ ತೋಟದ ಕೆಲಸಕ್ಕೆ ಕೂಲಿಯಾಳು ಕರೆತರಲು ಹೊರಟಿದ್ದ ಹೋಂಗಾರ್ಡ್ ರಮೇಶ್ ಎಂಬುವರ ಬೈಕ್ಗೆ ತ್ರಿಬ್ಬಲ್ ರೈಡಿಂಗ್ನಲ್ಲಿದ್ದ ಪುಂಡರು ಡಿಕ್ಕಿ ಹೊಡೆದಿದ್ದಾರೆ, ಉದ್ದೇಶಪೂರ್ವವಾಗಿ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿದ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಾಣಭಯದಿಂದ ರಮೇಶ್ ದೂರಕ್ಕೆ ಓಡಿಹೋಗಿದ್ದಾರೆ, ನೋಡನೋಡುತ್ತಿದ್ದಂತೆ ಬೈಕ್ನ ಪೆಟ್ರೋಲ್ ಟ್ಯಾಂಕ್ ಮುಚ್ಚಳ ತೆರೆದು ಪೆಟ್ರೋಲ್ ಚೆಲ್ಲಿ ಬೆಂಕಿ ಹಚ್ಚಿ, ಪುಂಡರು ವಿಕೃತಿ ಮೆರೆದಿದ್ದಾರೆ, ಬೆಂಕಿಗೆ ಬೈಕ್ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: ದೆಹಲಿ ಗಡಿ ರೈತಪ್ರತಿಭಟನೆ: ರಸ್ತೆತಡೆ ತೆರವುಗೊಳಿಸಲು ಸುಪ್ರೀಂ ಕೋರ್ಟ್ಗೆ ಅಹವಾಲು
ಗಾಂಜಾ ಪ್ಯಾಕೆಟ್ಗಳು: ಬೈಕ್ ಡಿಕ್ಕಿ ಹೊಡೆದು ರಮೇಶ್ ಜತೆ ವಾಗ್ವಾದಕ್ಕೆ ಇಳಿದ ಪುಂಡರು ತಳ್ಳಾಟ ನೂಕಾಟ ನಡೆಸಿದ್ದಾರೆ. ಈ ವೇಳೆ ಪುಂಡರ ಬಳಿಯಿದ್ದ ಬ್ಯಾಗ್ನಿಂದ ಗಾಂಜಾ ಪ್ಯಾಕೆಟ್ಗಳು ಕೆಳಗೆ ಬಿದ್ದಿವೆ, ಇದನ್ನು ಗಮನಿಸಿದ ರಮೇಶ್ಗೆ ಪುಂಡಾಟಕ್ಕೆ ಗಾಂಜಾ ನಶೆಯೇ ಕಾರಣ ಎಂದು ತಿಳಿದು ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು ಎನ್ನಲಾಗಿದೆ.
ಪುಂಡರು ಗಾಂಜಾ ಪ್ಯಾಕೆಟ್ಗಳ ಜತೆ ಕಬ್ಬಿಣದ ರಾಡ್ ಮತ್ತಿತರ ಮಾರಕಾಸ್ತ್ರಗಳನ್ನೂ ಇಟ್ಟುಕೊಂಡಿದ್ದರು ಎನ್ನಲಾಗಿದ್ದು, ರಸ್ತೆ ರಾಬರಿ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆನ್ನಟ್ಟಿ ಹಿಡಿದ ಗ್ರಾಮಸ್ಥರು: ಬೈಕ್ಗೆ ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿದ್ದ ವೇಳೆ, ರಮೇಶ್ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದ ಗ್ರಾಮಸ್ಥರನ್ನು ಕಂಡು ಪುಂಡರು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಅವರ ಬೆನ್ನಟ್ಟಿ ಹಿಡಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಗತ್ಯ ಪ್ರಯಾಣ ಬೇಡ, ಆನ್ಲೈನ್ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ
ಅಮರೀಂದರ್ ಸಿಂಗ್ ಬಿಜೆಪಿ ಸೇರುತ್ತಾರಾ? ತಮ್ಮ ಮುಂದಿನ ನಡೆಯ ಬಗ್ಗೆ ಕ್ಯಾಪ್ಟನ್ ಹೇಳಿದ್ದಿಷ್ಟು