ಕೋಲ್ಕತ: ಲಘು ಹೃದಯಾಘಾತದ ಬಳಿಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆರೋಗ್ಯದಲ್ಲಿ ಭಾನುವಾರ ಸುಧಾರಣೆ ಕಂಡುಬಂದಿದೆ. ದಾದಾ ಆರೋಗ್ಯ ಸಹಜಸ್ಥಿತಿಗೆ ಮರಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗಂಗೂಲಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಜತೆಗೆ ಶೀಘ್ರ ಚೇತರಿಕೆಗೆ ಹಾರೈಸಿದರು ಎನ್ನಲಾಗಿದೆ.
48 ವರ್ಷದ ಗಂಗೂಲಿ ಅವರ ಹೃದಯದ ರಕ್ತನಾಳದಲ್ಲಿದ್ದ 3 ಬ್ಲಾಕ್ಗಳನ್ನು ಶನಿವಾರ ತೆರವುಗೊಳಿಸಲಾಗಿದ್ದು, ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿದೆ. ಎದೆನೋವಿನ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗಂಗೂಲಿ ಅವರ ಪತ್ನಿ ಡೋನಾ ಜತೆಗೆ ಮೊದಲಿಗೆ ಮಾತನಾಡಿದ ಪ್ರಧಾನಿ ಮೋದಿ, ಬಳಿಕ ಗಂಗೂಲಿ ಅವರೊಂದಿಗೂ ಮಾತುಕತೆ ನಡೆಸಿದರು ಎನ್ನಲಾಗಿದೆ.
ಇದನ್ನೂ ಓದಿ: 17-18 ವರ್ಷದ ಪಾಕ್ ವೇಗಿಗಳ ನಿಜ ವಯಸ್ಸು ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ಮೊಹಮದ್ ಆಸಿಫ್
ಗಂಗೂಲಿ ಹೃದಯದ ಸ್ಥಿತಿಯನ್ನು ಗಮನಿಸಿ ಇನ್ನಷ್ಟು ಆ್ಯಂಜಿಯೋಪ್ಲಾಸ್ಟಿ ನಡೆಸಬೇಕೇ ಎಂಬ ಬಗ್ಗೆ ಸೋಮವಾರ ನಿರ್ಧರಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಜತೆಗೆ ಬೈಪಾಸ್ ಸರ್ಜರಿಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗಂಗೂಲಿ ಆಕ್ಸಿಜನ್ ಸಪೋರ್ಟ್ನಿಂದ ಹೊರಬಂದಿದ್ದಾರೆ. ಭಾನುವಾರ ಬೆಳಗ್ಗೆ ಗಂಗೂಲಿ ಉಪಹಾರ ಸೇವಿಸಿದ್ದು, ದಿನಪತ್ರಿಕೆಗಳನ್ನು ಓದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಜತೆಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಮಗುವಿನ ಆಟಿಕೆ ಖರೀದಿಗಾಗಿ ಬಯೋ-ಬಬಲ್ ಬ್ರೇಕ್ ಮಾಡಿದ್ದರೇ ಕೊಹ್ಲಿ, ಪಾಂಡ್ಯ?
ಕಂಬ್ಯಾಕ್ ದಾದಾ ಎಂದ ಅಭಿಮಾನಿಗಳು
ಆಸ್ಪತ್ರೆಯ ಹೊರಗೆ ಗಂಗೂಲಿ ಅವರ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು ಮತ್ತು ‘ಕಂಬ್ಯಾಕ್ ದಾದಾ’ ಘೋಷಣೆಗಳನ್ನು ಕೂಗಿದರು. ಮುಂಬೈನಲ್ಲೂ ಅಭಿಮಾನಿಗಳು ಗಂಗೂಲಿ ಚೇತರಿಕೆಗೆ ಪ್ರಾರ್ಥಿಸಿ, ಬಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ.
ಇನ್ನು 3-4 ವಾರ ವಿಶ್ರಾಂತಿ
ಬಿಸಿಸಿಐ ದೇಶೀಯ ಕ್ರಿಕೆಟ್ ಚಟುವಟಿಕೆ ಆರಂಭಿಸಲು ಮುಂದಾಗುತ್ತಿರುವ ನಡುವೆ ಗಂಗೂಲಿ, ಸಹಜ ಚಟುವಟಿಕೆಗಳಿಗೆ ಮರಳುವ ಮುನ್ನ 3-4 ವಾರಗಳ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ.
ಕೊನೇಕ್ಷಣದಲ್ಲಿ ಒಲಿದ ಅದೃಷ್ಟ, ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ತಂಡಕ್ಕೆ ಸೇರ್ಪಡೆ
ಧೋನಿ ಫಾರ್ಮ್ ಹೌಸ್ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್..!