ನವದೆಹಲಿ: ಅಲ್ ಕೈದಾ ಉಗ್ರ ಗುಂಪಿಗೆ ಸೇರಿದ 9 ಉಗ್ರರನ್ನು ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ದೇಶದ ವಿವಿಧೆಡೆ ದಾಳಿ ನಡೆಸಿ ಬಂಧಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಕೇರಳದ ಎರ್ನಾಕುಲಂನಲ್ಲಿ ನಡೆಸಲಾದ ದಾಳಿಯಲ್ಲಿ ಇವರನ್ನು ಬಂಧಿಸಲಾಗಿದೆ.
ಬಂಧಿತರ ಬಳಿ ಇದ್ದ ಡಿಜಿಟಲ್ ಉಪಕರಣ, ಡಾಕ್ಯುಮೆಂಟ್ಸ್, ಜಿಹಾದಿ ಸಾಹಿತ್ಯ, ಹರಿತ ಆಯುಧಗಳು, ಕಂಟ್ರಿ ಮೇಡ್ ಶಸ್ತ್ರಾಸ್ತ್ರಗಳು, ಸ್ಥಳೀಯವಾಗಿ ನಿರ್ಮಿಸಿದ ಬಾಡಿ ಆರ್ಮರ್, ಮನೆಯಲ್ಲೇ ಸ್ಫೋಟಕ ತಯಾರಿಸುವ ಮಾರ್ಗದರ್ಶಿ ಪುಸ್ತಕಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಆರು ಉಗ್ರರನ್ನು ಪಶ್ಚಿಮ ಬಂಗಾಳ, ಮೂವರನ್ನು ಕೇರಳದಿಂದ ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಇದನ್ನೂ ಓದಿ: ಒಂದೇ ಒಂದು ಕೂದಲನ್ನೂ ಕೊಂಕಿಸೋಕೆ ಆಗಲ್ಲ, ಏನೂ ಬಹಿರಂಗವಾಗಲ್ಲ- ಕೇರಳ ಸಚಿವ ಕೆ.ಟಿ.ಜಲೀಲ್
ಪ್ರಾಥಮಿಕ ತನಿಖೆ ವೇಳೆ, ಈ ಉಗ್ರರನ್ನು ಪಾಕಿಸ್ಥಾನ ಮೂಲದ ಅಲ್ ಕೈದಾ ಉಗ್ರ ಸಂಘಟನೆ ಸೋಷಿಯಲ್ ಮೀಡಿಯಾ ಮೂಲಕ ನೇಮಕ ಮಾಡಿಕೊಂಡಿದೆ. ರಾಷ್ಟ್ರ ರಾಜಧಾನಿ ಮತ್ತು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸುವುದಕ್ಕೆ ಪ್ರಚೋದಿತರಾಗಿದ್ದರು. ಈ ಉಗ್ರರ ತಂಡ ಫಂಡ್ ರೈಸಿಂಗ್ ನಲ್ಲಿ ಸಕ್ರಿಯವಾಗಿತ್ತು ಅಲ್ಲದೆ, ಕೆಲವು ಸದಸ್ಯರ ತಂಡ ದೆಹಲಿಗೆ ತೆರಳಿ ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಪಿತೂರಿ ರೂಪಿಸಿಕೊಂಡಿತ್ತು. ಈ ಉಗ್ರರ ಬಂಧನದಿಂದಾಗಿ ಸಂಭಾವ್ಯ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಎನ್ಐಎ ಹೇಳಿದೆ. (ಏಜೆನ್ಸೀಸ್)
ಆರೆಸ್ಸೆಸ್ ಶಕ್ತಿ ಕೇಂದ್ರ ನಾಗಪುರದಲ್ಲಿ 9 ಹಿರಿಯ ಆರೆಸ್ಸೆಸ್ ನಾಯಕರಿಗೆ ಕರೋನಾ, ಆಸ್ಪತ್ರೆಗೆ ದಾಖಲು