ಬೆಂಗಳೂರು: ಕಳೆದೆರಡು ತಿಂಗಳುಗಳಿಂದ ಕರೊನಾ ಸೋಂಕು ಭಾರತ ಮಾತ್ರವಲ್ಲದೇ ಇಡೀ ವಿಶ್ವದ ನಿದ್ದೆಗೆಡಿಸಿಬಿಟ್ಟಿದೆ. ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿರುವ ಕರೊನಾ ಸೋಂಕಿನಿಂದ ಜನರು ಕಂಗಾಲಾಗಿ ಹೋಗಿದ್ದಾರೆ.
ಅದರಲ್ಲಿಯೂ ತಣ್ಣಗಿದ್ದ ಭಾರತದಲ್ಲಿ ಕೆಲ ಜನರಿಂದಾಗಿ ಏಕಾಏಕಿ ಬಿರುಗಾಳಿ ಎಬ್ಬಿಸಿರುವ ಕರೊನಾ ಸೋಂಕು ಏರುಗತಿಯಲ್ಲಿಯೇ ಸಾಗಿದ್ದು, ಅಧಿಕ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿರುವ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿಬಿಟ್ಟಿದೆ.
ಹಾಗಿದ್ದರೆ ಈ ವರ್ಷಾಂತ್ಯದವರೆಗೆ ಈ ಕರೊನಾ ಮಾರಿ ಯಾವ ರೀತಿ ತನ್ನ ಅವತಾರ ತೋರುತ್ತದೆ ಎನ್ನುವುದನ್ನು ನಿಮ್ಹಾನ್ಸ್ ತಜ್ಞ ಪ್ರೊ. ಡಾ.ವಿ. ರವಿ ಅವರು ಹೇಳಿದ್ದಾರೆ. ನಿಮ್ಹಾನ್ಸ್ನ ನ್ಯೂರೋ ವೈರಾಲಜಿ ವಿಭಾಗದ ಹಿರಿಯ ಉಪನ್ಯಾಸಕರಾಗಿರುವ ಇವರು, ಸಾಕಷ್ಟು ಅಧ್ಯಯನದ ನಂತರ ಈ ಮಾಹಿತಿ ನೀಡಿದ್ದಾರೆ. ಇವರು ಕರ್ನಾಟಕದ ಕೋವಿಡ್-19 ಆರೋಗ್ಯ ಪಡೆಯ ನೋಡೆಲ್ ಅಧಿಕಾರಿ ಕೂಡ ಹೌದು.
ಇದನ್ನೂ ಓದಿ: ಆರೋಗ್ಯಸೇತು ಆ್ಯಪ್: ದೋಷ ಕಂಡುಹಿಡಿಯಿರಿ, ಸಲಹೆ ನೀಡಿ- ಲಕ್ಷ ಬಹುಮಾನ ಗೆಲ್ಲಿ!
ತುಂಬಾ ಆತಂಕದ ಸಂಗತಿ ಎಂದರೆ, ಪ್ರೊ.ರವಿ ಅವರ ಪ್ರಕಾರ ಡಿಸೆಂಬರ್ ವೇಳೆಗೆ ಭಾರತದಲ್ಲಿರುವ ಶೇ.50ರಷ್ಟು ಜನರು ಕೊರೋನಾ ಸೋಂಕಿಗೊಳಗಾಗಲಿದ್ದಾರಂತೆ! ಇಂಥ ಒಂದು ಆಘಾತಕಾರಿ ವಿಷಯವನ್ನು ಅವರು ತಿಳಿಸಿದ್ದಾರೆ. ಲಾಕ್ಡೌನ್ ಇರುವ ಸಮಯದಲ್ಲಿ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗಿರಲಿಲ್ಲ. ಆದರೆ ಕೆಲವೊಂದು ಕಾರಣಗಳಿಂದಾಗಿ ಲಾಕ್ಡೌನ್ ತೆರವು ಮಾಡುವುದು ಅನಿವಾರ್ಯವಾದ ಕಾರಣ, ಕೇಂದ್ರ ಸರ್ಕಾರ ಲಾಕ್ಡೌನ್ ತೆರವಿಗೆ ಷರತ್ತುಬದ್ಧ ಅನುಮತಿಯನ್ನೇನೋ ನೀಡಿದೆ. ಆದರೆ ಈ ತೆರವೇ ಭಾರತಕ್ಕೆ ಮುಳುವಾಗಿದೆ.
ಲಾಕ್ಡೌನ್ ಸಡಿಲಿಕೆ ನಂತರ ಸೋಂಕು ಏರುಗತಿಯಲ್ಲಿ ಸಾಗಿದೆ. ಇದೇ ರೀತಿ ಮುಂದುವರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶೇ.5ರಷ್ಟು ಭಾರತೀಯರು ಸೋಂಕುಪೀಡಿತರಾಗುವ ಸಾಧ್ಯತೆ ಇದೆ ಎಂದು ಅವರು ಅಂದಾಜಿಸಿದ್ದಾರೆ.
ಇದು ಅತ್ಯಂತ ಆತಂಕದ ವಿಷಯವಾದರೂ, ಇದೇ ಸಂದರ್ಭದಲ್ಲಿ ಪ್ರೊ.ರವಿ ಅವರು ನಿರಾಳವಾಗುವಂಥ ಮಾಹಿತಿಯನ್ನೂ ನೀಡಿದ್ದಾರೆ. ಅದೇನೆಂದರೆ ಸೋಂಕಿಗೊಳಗಾಗಿದ್ದೇನೆಂಬ ವಿಚಾರ ಶೇ.90ರಷ್ಟು ಜನರಿಗೆ ಗೊತ್ತಿರುವುದೇ ಇಲ್ಲ ಎಂದು ತಿಳಿಸಿದ್ದಾರೆ!
ಇದನ್ನೂ ಓದಿ: ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್!
ಇದರ ಅರ್ಥ, ಇತರ ಕೆಲವು ಸೋಂಕುಗಳಂತೆ ಕರೊನಾ ಸೋಂಕು ಕೂಡ ಹಲವರ ದೇಹದೊಳಕ್ಕೆ ಹೊಕ್ಕಿರುತ್ತದೆ. ಆದರೆ ಅವರಲ್ಲಿ ಇರುವ ರೋಗನಿರೋಧಕ ಶಕ್ತಿಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಸೋಂಕು ಇದ್ದರೂ ಅದು ದೇಹಕ್ಕೆ ಯಾವುದೇ ತೊಂದರೆ ಮಾಡುವುದೇ ಇಲ್ಲ. ಅಷ್ಟೇ ಏಕೆ? ತಾವು ಸೋಂಕು ಪೀಡಿತರಾಗಿರುವ ಬಗ್ಗೆಯೂ ಅವರಿಗೆ ಗೊತ್ತೇ ಇರುವುದಿಲ್ಲ. ಇದು ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. ಇದೇ ರೀತಿ, ಮುಂದೆ ಕೂಡ ಆಗಲಿದೆ. ಆದ್ದರಿಂದ ಹೆದರುವ ಅಗತ್ಯವಿಲ್ಲ. ಆರೋಗ್ಯವನ್ನು ಸರಿಯಾಗಿ ಕಾಪಿಟ್ಟುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಶೇ.5-10 ರಷ್ಟು ಜನರಿಗೆ ಮಾತ್ರ ಕೃತಕ ಆಕ್ಸಿಜನ್ ನೀಡಲಾಗುತ್ತದೆ. ಶೇ.50ರಷ್ಟು ಜನರಿಗೆ ವೆಂಟಿಲೇಟರ್ ಸಹಾಯ ಬೇಕಾಗುತ್ತದೆ ಎಂದಿದ್ದಾರೆ.
ಈಗ ನಡೆಯುತ್ತಿರುವ ಲಾಕ್ಡೌನ್ 4.0 ಕೊನೆಗೊಂಡ ನಂತರ ರಾಜ್ಯ ಸರ್ಕಾರಗಳು ವೈದ್ಯಕೀಯ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸುವ ಅಗತ್ಯವಿದೆ. ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಶೇ.50ರಷ್ಟು ಕರೊನಾ ಸೋಂಕಿತರು ಗುಣಮುಖ: 75 ಹೊಸ ಕೇಸ್
ಈಗಾಗಲೇ ಸರ್ಕಾರಗಳು ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ಸೋಂಕಿನ ಸಂಖ್ಯೆ ಹೆಚ್ಚಾಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ಹಿಂದೆಯೇ ಪ್ರತೀ ಜಿಲ್ಲೆಯಲ್ಲೂ ಕರೊನಾ ಯೋಗಾಲಯಗಳನ್ನು ಸ್ಥಾಪನೆ ಮಾಡುವಂತೆ ಸೂಚಿಸಿದೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿನ ಪ್ರಯೋಗಾಲಯಕ್ಕೆ ಕರೊನಾ ಪರೀಕ್ಷೆ ಮಾಡಲು ಅನುಮತಿ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ಸಿಗುತ್ತಿದ್ದು, ಇದು ತುಂಬಾ ಸಂತೋಷದ ವಿಷಯ. ಜೂನ್.15ರೊಳಗಾಗಿ ಕರ್ನಾಟಕದಲ್ಲಿ ಪ್ರಯೋಗಾಲಯಗಳ ಸಂಖ್ಯೆ 75ಕ್ಕೆ ಏರಿಕೆಯಾಗಬೇಕೆಂಬುದು ನನ್ನ ಕನಸಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ಸಾವಿನ ಸಂಖ್ಯೆ ಶೇ.3-4 ರಷ್ಟಿದೆ. ಆದರೆ, ಈಗಾಗಲೇ ಗುಜರಾತ್ ರಾಜ್ಯದಲ್ಲಿ ಶೇ.6ಕ್ಕೆ ತಲುಪಿದೆ. ಈ ಸೋಂಕಿನ ಲಸಿಕೆಗಾಗಿ 2021ರ ಮಾರ್ಚ್ ತಿಂಗಳವರೆಗೂ ನಾವು ಕಾಯಲೇಬೇಕಿದೆ. ಈ ಸೋಂಕಿನ ಜತೆ ಬದುಕುವುದನ್ನು ಜನರು ಕಲಿಯಲೇಬೇಕು. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದಿರುವ ಪ್ರೊ.ರವಿ, ಎಬೋಲಾ, ಸಾರ್ಸ್ನಂತಹ ಡೆಡ್ಲಿ ವೈರಸ್ ಕರೊನಾ ಅಲ್ಲ, ಆದ್ದರಿಂದ ಎಚ್ಚರಿಕೆ ತುಂಬಾ ಅಗತ್ಯ. ಸರ್ಕಾರಗಳು ಹೇಳುವ ಸೂಚನೆಗಳನ್ನು ಪಾಲಿಸುವುದರ ಜತೆಗೆ ಆರೋಗ್ಯದ ಬಗ್ಗೆ ಸದಾ ಗಮನ ಹರಿಸುತ್ತಿರಬೇಕು ಎಂದಿದ್ದಾರೆ.(ಏಜೆನ್ಸೀಸ್)
ಇದೇನಪ್ಪಾ ಲಾಕ್ಡೌನು… ಎಂದು ಶಪಿಸ್ತಾ ಇರೋ ಮದುಮಕ್ಕಳೇ ಇದನ್ನೊಮ್ಮೆ ಓದಿಬಿಡಿ!