ಶ್ರೀನಗರ: ಮಹಾಮಾರಿ ಕರೊನಾ ವೈರಸ್ ಲಾಕ್ಡೌನ್ನಿಂದ ಕುಂಠಿತವಾಗಿರುವ ಜಮ್ಮು ಮತ್ತು ಕಾಶ್ಮೀರ ಉದ್ಯಮ ವಲಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1,350 ಕೋಟಿ ರೂ.ಗಳ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.
ಕಳೆದ ವಾರವಷ್ಟೇ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಮನೋಜ್ ಸಿನ್ಹಾ ಪರಿಹಾರ ಘೋಷಣೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಜನತೆಗೆ ನೀರು ಮತ್ತು ವಿದ್ಯುತ್ ಬಿಲ್ನಲ್ಲಿ ಶೇ. 50 ರಷ್ಟು ರಿಯಾಯಿತಿ ಸೇರಿದಂತೆ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ವಿಶೇಷ ಪರಿಹಾರವನ್ನು ಘೋಷಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಬಳಲುತ್ತಿರುವ ಜಮ್ಮು ಮತ್ತು ಕಾಶ್ಮೀರದ ಉದ್ಯಮ ಸಮುದಾಯಗಳಿಗಾಗಿ 1,350 ಕೋಟಿ ರೂ. ಆರ್ಥಿಕ ಪರಿಹಾರ ಪ್ಯಾಕೇಜ್ಗೆ ಅನುಮೋದನೆ ನೀಡಿದ್ದೇವೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದ ಆತ್ಮನಿರ್ಭರ ಭಾರತ ಯೋಜನೆಯ ಪ್ರಯೋಜನಗಳಿಗೆ ಇದು ಹೆಚ್ಚುವರಿಯಾಗಿದೆ ಎಂದು ತಿಳಿಸಿದರು. ಇನ್ನು ಸಾಲ ಪಡೆದವರಿಗೆ 2021ರ ಮಾರ್ಚ್ ವರೆಗೆ ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸಂಬಳ ಕೇಳಿದ್ದಕ್ಕೆ ಬಿಯರ್ ಬಾಟಲಿಯಿಂದ ಚುಚ್ಚಿ-ಚುಚ್ಚಿ ಕೊಂದೇ ಬಿಟ್ಟರು!
ಕೈಗಾರಿಕ ವಲಯದ ಪುನರುಜ್ಜೀವನಕ್ಕಾಗಿ ನೂತನ ಕೈಗಾರಿಕಾ ನೀತಿಯನ್ನು ಆದಷ್ಟು ಬೇಗ ಘೋಷಿಸಲಾಗುವುದು. ಕಳೆದ ವರ್ಷ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರ ತೀವ್ರ ಸಂಕಷ್ಟದಲ್ಲಿದೆ. ಸರಿದಾರಿಗೆ ತರಲು ನೂತನ ಕೈಗಾರಿಕ ನೀತಿ ಸಹಾಯವಾಗಲಿದೆ ಎಂದು ತಿಳಿಸಿದರು.
ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಪುನರುಜ್ಜೀವನದ ವಿಧಾನಗಳು ಮತ್ತು ಉದ್ಯಮ ವಲಯಗಳಿಗೆ ಬೆಂಬಲ ನೀಡುವುದರ ಸಂಬಂಧ ಕೆಲಸ ಮಾಡಲು ಕಳೆದ ತಿಂಗಳು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಸೆಪ್ಟೆಂಬರ್ 1ಕ್ಕೆ ನೀಡಲಾಗಿದ್ದ ಗಡುವಿಗೂ ಮುಂಚೆಯೇ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ ಎಂದು ಗವರ್ನರ್ ಹೊಗಳಿದರು.
ಇನ್ನು ವಿಶೇಷ ಪ್ಯಾಕೇಜ್ ಕುರಿತು ಮಾತನಾಡಿದ ಗವರ್ನರ್, ಉದ್ಯಮ ಸಮುದಾಯದ ಪ್ರತಿ ಸಾಲಗಾರರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 6 ತಿಂಗಳವರೆಗೆ ಯಾವುದೇ ಷರತ್ತುಗಳಿಲ್ಲದೆ ಕೇವಲ ಶೇ. 5ರಷ್ಟು ಬಡ್ಡಿಯಲ್ಲಿ ಧನ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಇದು ಉದ್ಯಮಿಗಳಿಗೆ ಬಹು ದೊಡ್ಡ ಪರಿಹಾರವಾಗಲಿದ್ದು, ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.
ಮುಂದಿನ ಒಂದು ವರ್ಷದವರೆಗೆ ಕುಡಿಯುವ ನೀರು ಮತ್ತು ವಿದ್ಯುತ್ ಬಿಲ್ನಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದ್ದು, ಇದಕ್ಕಾಗಿ 105 ಕೋಟಿ ರೂ. ವ್ಯಯಿಸುತ್ತಿದ್ದೇವೆ. ಇದರಿಂದ ರೈತರು, ಸಾಮಾನ್ಯ ಜನರು ಮತ್ತು ಉದ್ಯಮಿಗಳು ಸೇರಿದಂತೆ ಅನೇಕ ಜನರಿಗೆ ನೆರವಾಗಲಿದೆ ಎಂದು ಸಿನ್ಹಾ ಹೇಳಿದರು. (ಏಜೆನ್ಸೀಸ್)
ದಾಖಲೆ ಬರೆಯಿತು ಕಾಲಿವುಡ್ ನಟ ವಿಜಯ್ ಮಾಡಿದ ಆ ಒಂದೇ ಒಂದು ಟ್ವೀಟ್!