ಭೋಪಾಲ್: ಕಾಂಪೌಡ್ ಏರಿ ಮಧ್ಯಪ್ರದೇಶ ನ್ಯಾಯಾಧೀಶರ ಅಧಿಕೃತ ನಿವಾಸದ ಮನೆಯಂಗಳ ಪ್ರವೇಶಿಸಿದ ಕಳ್ಳರು ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆಂಬ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶಾಕ್ ಆಗುವಂತಹ ವಿಚಾರವೊಂದು ತಿಳಿದಿದೆ.
ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್ರನ್ನು ಬಾಂಬ್ ಸ್ಪೋಟಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ
ರಾಜಧಾನಿ ಭೋಪಾಲ್ನಿಂದ 560 ಕಿ.ಮೀ. ದೂರದಲ್ಲಿರುವ ಸಿಧಿ ಏರಿಯಾದಲ್ಲಿರುವ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ವಿವೇಕ್ ಕುಮಾರ್ ಸಿಂಗ್ ಅವರ ಅಧಿಕೃತ ನಿವಾಸಕ್ಕೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಕಳ್ಳರು ಪ್ರವೇಶ ನೀಡಿದ್ದರು.
ಕಾಂಪೌಂಡ್ ಏರಿ ಮನೆಯಂಗಳ ಪ್ರವೇಶಿಸಿದ ಕಳ್ಳರು ಬಳಿಕ ಶೌಚಗೃಹದ ವೆಂಟಿಲೇಟರ್ ಕತ್ತರಿಸಿ ಮನೆಗೆ ನುಗ್ಗಿದ್ದಾರೆ. ಆದರೆ, ಅಚ್ಚರಿಯ ವಿಚಾರವೆಂದರೆ ಕಳ್ಳರು ಯಾವುದೇ ಬೆಲೆ ಬಾಳುವ ವಸ್ತುಗಳಿಗೆ ಕೈಹಾಕದೇ, ಕೇವಲ 5 ಚಪಾತಿ ಮತ್ತು ಜಡ್ಜ್ ಪ್ಯಾಂಟಿನ ಜೇಬಿನಲ್ಲಿದ್ದ 1900 ರೂ. ಅನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಇದೇ ವಿಚಾರ ಸಿಧಿಯಲ್ಲಿ ಚರ್ಚಾ ವಿಷಯವಾಗಿದೆ.
ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!
ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಶ್ವಾನದಳ ಸಹಾಯದೊಂದಿಗೆ ಕಳ್ಳರಿಗೆ ಬಲೆ ಬೀಸಿದ್ದಾರೆ. ಕರೊನಾ ವೈರಸ್ನಿಂದ ರಾಷ್ಟ್ರವ್ಯಾಪಿ ಹೇರಲಾಗಿರುವ ಲಾಕ್ಡೌನ್ನಿಂದಾಗಿ ಉದ್ಯೋಗವಿಲ್ಲದೇ, ಹಸಿವು ತೀರಿಸಿಕೊಳ್ಳಲು ಸ್ಥಳೀಯರೇ ಒಟ್ಟುಗೂಡಿ ಹೀಗೆ ಮಾಡಿದ್ದಾರೆಂಬ ಚರ್ಚೆಯು ನಡೆಯುತ್ತಿದೆ. (ಏಜೆನ್ಸೀಸ್)