ಬೆಳಗಾವಿ: ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳ್ಳಿ ಆಭರಣ ಸಾಗಿಸುತ್ತಿದ್ದ ಪ್ರಕರಣ ಭೇದಿಸಿರುವ ಪೊಲೀಸರು ತಂದೆ-ಮಗ ಸೇರಿ ಮೂವರನ್ನು ಸೋಮವಾರ ಬಂಧಿಸಿ, ಅವರಿಂದ 14,39,670 ರೂ. ಬೆಲೆಬಾಳುವ 47.989 ಕೆಜಿ ಬೆಳ್ಳಿ ಆಭರಣ ಹಾಗೂ 4 ಲಕ್ಷ ರೂ. ಮೌಲ್ಯದ ಕ್ರೂಷರ್ ವಾಹನ ವಶಪಡಿಸಿಕೊಂಡಿದ್ದಾರೆ. ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕೆರಲೆ ಗ್ರಾಮದ ಸುಹಾಸ ಭಾಸ್ಕರ್ ಗಾಯಕವಾಡ (45), ಸಂದೀಪ ಸುಹಾಸ ಗಾಯಕವಾಡ (31) ಹಾಗೂ ಬೆಳಗಾವಿಯ ಹಿಂಡಲಗಾದ ಗೋಕುಲ ನಗರದ ಮಾರುತಿ ಅಮೃತ ಮುತಗೇಕರ (38) ಬಂಧಿತರು. ಸೋಮವಾರ ಬೆಳಗ್ಗೆ ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಆಭರಣ ಸಾಗಣೆ ಮಾಡುತ್ತಿದ್ದ ವೇಳೆ ಹತ್ತರಗಿ ಸಮೀಪದ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ಹುಕ್ಕೇರಿ ಸಿಪಿಐ ಜಿ.ಐ. ಕಲ್ಯಾಣಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಿಎಸ್ಐ ರಮೇಶ ಪಾಟೀಲ, ಪೇದೆಗಳಾದ ವಿಠ್ಠಲ ನಾಯಕ, ಎಲ್.ವೈ. ಕಿಲಾರಗಿ, ಎಚ್.ಬಿ. ಪಾಟೀಲ, ಎಸ್.ಎನ್. ಅರಬಳ್ಳಿ ಇದ್ದರು. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.