ಬೆಂಗಳೂರು: ಕೈದಿಗಳಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 240 ಕೈದಿಗಳಿಗೆ ಕರೊನಾ ಪಾಸಿಟೀವ್ ಬಂದಿದೆ ಎಂದು ತಿಳಿಸಿದರು.
“ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿದೆ. ಪರಿಶೀಲನೆ ನಡೆಸಿದ್ದೇನೆ. ಜೈಲಿನ ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇನ್ನಷ್ಟು ಸೌಲಭ್ಯಗಳು ಬೇಕಾಗಿವೆ. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅವಶ್ಯಕತೆ ಇದೆ. ಎಸ್.ಡಿ.ಆರ್.ಎಫ್ ಫಂಡ್ನಿಂದ 5 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ” ಎಂದರು.
ಇದನ್ನೂ ಓದಿ: ಲಾಕ್ಡೌನ್ ವೇಳೆ ಓಡಾಡಲು ಪಾಸ್ ನೀಡುತ್ತಿಲ್ಲ : ಪೊಲೀಸ್
ಉಚ್ಛ ನ್ಯಾಯಾಲಯದ ಮಾರ್ಗದರ್ಶನದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕೈದಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ಬರುವ ಕೈದಿಗಳಿಗೆ 14 ದಿನ ಕ್ವಾರೆಂಟೈನ್ ಮುಂದುವರೆಸಲಾಗುವುದು. ಪ್ರತಿ ವಾರ ಹೆಲ್ತ್ ಕ್ಯಾಂಪ್ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ 240 ಕೈದಿಗಳು ಕರೊನಾ ಪಾಸಿಟಿವ್ ಆಗಿದ್ದಾರೆ. ಅವರೆಲ್ಲರೂ ಏಸಿಮ್ಟಮಾಟಿಕ್ ಆಗಿದ್ದಾರೆ. ಬೆಂಗಳೂರಿನ ಹಜ್ಜ್ ಭವನದಲ್ಲಿ ಐಸೋಲೇಷನ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟ ಕೈದಿಗಳಿಗೆ ಶೇ. 80ರಷ್ಟು ವಾಕ್ಸಿನೇಷನ್ ಮಾಡಲಾಗಿದೆ ಎಂದರು.