ನಿಪ್ಪಾಣಿ, ಬೆಳಗಾವಿ: ಸ್ಥಳೀಯ ಪದವಿ ಮಹಾವಿದ್ಯಾಲಯದಲ್ಲಿ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರ ಅನುಕೂಲಕ್ಕಾಗಿ ನಗರದಲ್ಲಿ 2 ಎಕರೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಭಿವಶಿ ಗ್ರಾಮದಲ್ಲಿ ಗುರುವಾರ ಸಾರ್ವಜನಿಕ ಸಮಾಜ ಮಂದಿರದಿಂದ ನಿತೀನ ಪಾಟೀಲ ತೋಟ ಮತ್ತು ಬಾಲಕೃಷ್ಣ ಪವಾರ ಮಹಾದೇವ ಚೌಗುಲೆ ತೋಟದವರೆಗೆ 1 ಕೋಟಿ ರೂ. ವೆಚ್ಚದಲ್ಲಿ 2 ಕಿಮೀ ರಸ್ತೆ ಡಾಂಬರೀಕರಣ, ಸಾರ್ವಜನಿಕ ಬಾವಿಯಿಂದ ಬಾಲಕೃಷ್ಣ ಪುಂಡಲೀಕ ತೋಟದ ಮುಖಾಂತರ ನದಿಯವರೆಗೆ 70 ಲಕ್ಷ ರೂ.ವೆಚ್ಚದಲ್ಲಿ 1.5 ಕಿಮೀ ರಸ್ತೆ ನಿರ್ಮಾಣ ಮತ್ತು 12 ಲಕ್ಷ ರೂ. ವೆಚ್ಚದಲ್ಲಿ ಭಿವಶಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಕೊಠಡಿ ನಿರ್ಮಾಣ ಕಾಮಗಾರಿಗೆ ಅವರು ಚಾಲನೆ ನೀಡಿ ಮಾತನಾಡಿದರು.
ಭಿವಶಿ ಗ್ರಾಮದಲ್ಲಿ 9.89 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಮಹಿಳಾ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಗ್ರಾಮದ ಪ್ರತಿ ಓಣಿಗಳಲ್ಲಿ ಮಹಿಳೆಯರ ಗುಂಪುಗಳನ್ನು ಸ್ಥಾಪಿಸಿ ಗೃಹಕೈಗಾರಿಕೆಗೆ ಒತ್ತು ನೀಡಲಾಗುವುದು ಮತ್ತು ಎಲ್ಲ ಸಂಘ ಸಂಸ್ಥೆಗಳಿಗೆ ಧನಸಹಾಯ ಮಾಡಲಾಗುವುದು ಎಂದರು.
ಪ್ರತಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದು, 10.5 ಕೋಟಿ ರೂ. ವೆಚ್ಚದಲ್ಲಿ 95 ಅಂಗನವಾಡಿ ಕೇಂದ್ರಗಳ ಕೊಠಡಿಗಳನ್ನು ನಿರ್ಮಿಸಲಾಗಿದೆ. ಎಲ್ಲ ಸರ್ಕಾರಿ ಮಹಾವಿದ್ಯಾಲಯಗಳಿಗೆ ಕೊಠಡಿಗಳನ್ನು ಕಲ್ಪಿಸುವ ಜತೆಗೆ, ಕ್ಷೇತ್ರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪಶುಗಳ ಚರ್ಮಗಂಟು ರೋಗ ಪ್ರತಿಬಂಧಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲಗೊಂಡ ಪಾಟೀಲ, ಸಂಚಾಲಕ ರಾಮಗೊಂಡ ಪಾಟೀಲ, ಉಜ್ವಲಾ ಶಿಂಧೆ, ಪ್ರಕಾಶ ಶಿಂಧೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಕೊಗನೋಳಿ, ಉಪಾಧ್ಯಕ್ಷೆ ಸುಜಾತಾ ಚೌಗುಲೆ, ಅಮಿತ ಮಗದುಮ್ಮ, ಸಿದ್ದು ನರಾಟೆ, ಪಿಎಲ್ಡಿ ಬ್ಯಾಂಕ್ ಚೇರ್ಮನ್ ಎಸ್.ಎಸ್. ಢವಣೆ, ಗ್ರಾಪಂ ಮಾಜಿ ಅಧ್ಯಕ್ಷ ಮಧುಕರ ಪಾಟೀಲ ಇತರರಿದ್ದರು.