ಮುಂಬೈ: ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದುಕೊಂಡಿರುವ ಕರೊನಾ ತುಂಬಾ ಅಪಾಯಕಾರಿ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಯುವಕರನ್ನು ಸಹ ತನ್ನ ಮೃತ್ಯುಕೂಪದಲ್ಲಿ ಕರೊನಾ ಸೆಳೆದುಕೊಂಡಿದೆ. ಹೀಗಿರುವಾಗ ಬೊಜ್ಜು, ಮಧುಮೇಹ, ಅಸ್ತಮಾ ಮತ್ತು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಹೊಂದಿರುವ 172 ಕೆಜಿ ತೂಕದ ಮಹಿಳೆಗೆ ಕರೊನಾ ತಗುಲಿದರೆ ಬದುಕುವುದು ಸಾಧ್ಯವಾ? ಅನೇಕರು ಸಾಧ್ಯವಿಲ್ಲ ಎನ್ನುವ ಉತ್ತರ ಕೊಡುತ್ತಾರೆ. ಆದರೆ, ಸಾಧ್ಯವಿದೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಹೌದು, ಮುಂಬೈ ಮೂಲದ 62 ವರ್ಷ 172 ಕೆಜಿ ತೂಕದ ಮಹಿಳೆ ಕರೊನಾ ವೈರಸ್ಗೆ ಸೆಡ್ಡು ಹೊಡೆದಿದ್ದಾರೆ. ಮೊದಲೇ ಬೊಜ್ಜು, ಮಧುಮೇಹ, ಅಸ್ತಮಾ ಮತ್ತು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಹೊಂದಿದ್ದ ಮಹಿಳೆ ಬದುಕಿರುವುದು ನಿಜಕ್ಕೂ ಪವಾಡ ಎಂದು ಸ್ವತಃ ಚಿಕಿತ್ಸೆ ನೀಡಿದ ವೈದ್ಯರೇ ಹೇಳಿದ್ದಾರೆ.
ಮೆಹನಾಜ್ ಲೊಖಂಡವಾಲ ಎಂಬ ಮಹಿಳೆ ಕರೊನಾದಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. ಬೊಜ್ಜಿನ ದೇಹ, ಮಧುಮೇಹ ಹಾಗೂ ಅಸ್ತಮಾದಂತಹ ಕಾಯಿಲೆ ಹೊಂದಿರುವವರು ಕರೊನಾದಿಂದ ಪಾರಾಗಿರುವುದು ತುಂಬಾ ಕಷ್ಟ. ಏಕೆಂದರೆ ವಿಶ್ವದಾದ್ಯಂತ ಸಾವಿಗೀಡಾಗಿರುವ ಪೈಕಿ ಮೊದಲೇ ಕಾಯಿಲೆಗಳನ್ನು ಹೊಂದಿದ್ದವರೇ ಹೆಚ್ಚು. ಏಕೆಂದರೆ, ಅಂಥವರು ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವೇ ಸರಿ. ಹೀಗಿರುವಾಗ ಮೆಹನಾಜ್ ಎಲ್ಲವನ್ನು ಮೆಟ್ಟಿನಿಂತು ಕರೊನಾ ಗೆದಿದ್ದಾರೆ. 172 ಕೆಜಿಯ ದಡೂತಿ ದೇಹ, ಸಾಲದಕ್ಕೆ ಅಸ್ತಮಾ, ಮಧುಮೇಹ ಮತ್ತು ಮಾರಣಾಂತಿಕ ಕ್ಯಾನ್ಸರ್ ಇದ್ದರು ಇದೀಗ ಕರೊನಾದಿಂದ ಗುಣಮುಖರಾಗಿ ಎಲ್ಲರನ್ನೂ ಅಚ್ಚರಿದೆ ದೂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮೆಹನಾಜ್, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತರೆ ಎಲ್ಲವೂ ಸಾಧ್ಯವೆಂದಿದ್ದಾರೆ. ಆಸ್ಪತ್ರೆ, ಔಷಧಿ, ವೈದ್ಯರು ಮತ್ತು ಕೈಹಿಡಿದು ಮೇಲಕ್ಕೆ ಎತ್ತವವರು ಎಲ್ಲವು ಮುಖ್ಯ. ಪ್ರೀತಿ, ಪ್ರಾರ್ಥನೆ ಮತ್ತು ಇಡೀ ವಿಶ್ವದ ಆಶೀರ್ವಾದ ನಮ್ಮನ್ನು ಕಾಪಾಡುತ್ತದೆ. ಕರೊನಾ ನಮ್ಮನ್ನು ಸೋಲಿಸಲಿದೆ ಎಂಬುದನ್ನು ಮನದಲ್ಲಿ ಇಟ್ಟುಕೊಳ್ಳದೇ, ನಾನು ಕರೊನಾವನ್ನು ಮಣಿಸಿ, ವಿಜಯಿಯಾಗುತ್ತೇನೆ ಎಂಬುದು ಮನದಲ್ಲಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಾರೆ ಮೆಹನಾಜ್.
ಈ ಬಗ್ಗೆ ಮಾತನಾಡಿರುವ ಬಾಂಬೆ ಆಸ್ಪತ್ರೆಯ ಡಾ. ಗೌತಮ್ ಭನ್ಸಾಲಿ, ಮೆಹನಾಜ್ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಆಮ್ಲಜನಕದ ಮಟ್ಟ 82 ರಿಂದ 84 ರಲ್ಲಿ ಓಡುತ್ತಿತ್ತು. ಅಲ್ಲದೆ, ಅವರಿಗೆ ಕ್ಯಾನ್ಸರ್, ಮಧುಮೇಹ, ಹೆಚ್ಚಿನ ಒತ್ತಡ, ಅಸ್ತಮಾ ಸಹ ಇತ್ತು. ಇದರೊಂದಿಗೆ ಬೊಜ್ಜನು ಹೊಂದಿದ್ದ ಆಕೆ ಬರೋಬ್ಬರಿ 172 ಕೆಜಿ ಇದ್ದರು. ವೆಂಟಿಲೇಟರ್ ಹಾಕಲು ಸಹ ಕಷ್ಟವಾಗಿತ್ತು. ಇಂತಹ ವಿಷಮ ಸ್ಥಿತಿಯಲ್ಲೂ ಅವರನ್ನು ದಾಖಲು ಮಾಡಿಕೊಂಡು, ಹೆಚ್ಚಿನ ಆಮ್ಲಜನಕವನ್ನು ಹರಿಸಿದೆವು. ಸುಮಾರು 15 ಲೀಟರ್ ಆಮ್ಲಜನಕವನ್ನು ಇಟ್ಟೆವು. ಸುಮಾರು ನಾಲ್ಕು ದಿನಗಳವರೆಗೂ ಹಾಗೇ ಇದ್ದರು. ಇದರ ನಡುವೆ ಎಕ್ಸ್ರೇ ವರದಿಯು ಸಹ ದುರಂತವಾಗಿತ್ತು. ಹೀಗಿದ್ದರೂ ಕರೊನಾ ಶಿಷ್ಠಾಚಾರದಂತೆ ಚಿಕಿತ್ಸೆ ಆರಂಭಿಸಿದೆವು. ಆದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಕೊನೆಯ ಪ್ರಯತ್ನ ಎಂಬಂತೆ ಬಿಪ್ಯಾಪ್ ಯಂತ್ರದ ಮೇಲೆ ಇಟ್ಟೆವು ಎಂದು ಭನ್ಸಾಲಿ ಹೇಳಿದ್ದಾರೆ.
ಮೆಹನಾಜ್ ಸುಮಾರು ಒಂದು ತಿಂಗಳು ಬಾಂಬೆ ಆಸ್ಪತ್ರೆಯಲ್ಲಿದ್ದರು. ಇಲ್ಲಿ ಒಂದು ನಿಮಿಷಕ್ಕೆ 15 ಲೀಟರ್ ಆಮ್ಲಜನಕವನ್ನು ಉಸಿರಾಡುತ್ತಿದ್ದರು. ಇದೀಗ ಡಿಸ್ಚಾರ್ಜ್ ಆಗಿರುವ ಅವರು ಮನೆಯಲ್ಲೇ 1 ಲೀಟರ್ ಆಕ್ಸಿಜನ್ ಉಸಿರಾಡುತ್ತಿದ್ದಾರೆ. ಒಂದು ವೇಳೆ ಸರಿಯಾದ ಸಮಯಕ್ಕೆ ದಾಖಲಾಗಿದ್ದರೆ, ಇನ್ನು ಬೇಗ ಚೇತರಿಕೆಯಾಗಬಹುದಿತ್ತು ಎಂದು ಮೆಹನಾಜ್ ಹೇಳಿದ್ದು, ನೀವು ನನ್ನಂತೆ ನಿರ್ಲಕ್ಷಿಸಬೇಡಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ ವೈದ್ಯರ ಸಲಹೆ ಸ್ವೀಕರಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಯುವತಿ ಸೌಂದರ್ಯ..!
ಸುಮಾರು 10 ದಿನ ಬಿಪ್ಯಾಪ್ ಯಂತ್ರದ ಮೇಲೆ ಇಟ್ಟಿದೆವು. ನಂತರದಲ್ಲಿ ಚೇತರಿಯಾಗುತ್ತಾ ಬಂದರು. 16 ಮತ್ತು 17 ದಿನಗಳ ಬಳಿಕ ಕರೊನಾ ನೆಗಿಟಿವ್ ಬಂದಿತು. ಎರಡು ಬಾರಿಯ ವರದಿಯೂ ನೆಗಿಟಿವ್ ಆಯಿತು. ಬಳಿಕ ಐಸಿಯುಗೆ ಸ್ಥಳಾಂತರಿಸಿದರೂ ಬಿಪ್ಯಾಪ್ನಲ್ಲಿ ಇಟ್ಟಿದೆವು ಮಾಸ್ಕ್ ಮೇಲೆಯೇ ಆಮ್ಲಜನಕವನ್ನು ನೀಡಲಾಗುತ್ತಿತ್ತು. ಹೀಗೆ ಗುಣಮುಖರಾದರು. ನಿಜಕ್ಕೂ ಇದೊಂದು ಸವಾಲಾಗಿತ್ತು ಎಂದು ಭನ್ಸಾಲಿ ಮೆಲಕು ಹಾಕಿದರು.
ಅಂದಹಾಗೆ ಮೆಹನಾಜ್ ಆಗಸ್ಟ್ 28ರಂದು ಆಸ್ಪತ್ರೆಗೆ ದಾಖಲಾದರು. ತಿಂಗಳ ಬಳಿಕ ಇದೀಗ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ಕೊನೆಗೂ ಘೋಷಣೆಯಾಯ್ತು ತಮಿಳುನಾಡು ಸಿಎಂ ಅಭ್ಯರ್ಥಿ ಹೆಸರು- ಕುತೂಹಲಕ್ಕೆ ತೆರೆ