ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಸೇನಾ ದಾಳಿಗೆ 15 ಪಾಕಿಸ್ತಾನ ಯೋಧರು ಹಾಗೂ 8 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಭದ್ರತಾ ಪಡೆಯ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಯಾವುದೇ ಕೃತ್ಯವನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಪಾಕ್ಗೆ ರವಾನಿಸಿದ ಸಂದೇಶ ಇದಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುದ್ಧ ವಿರಾಮವನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಕಿಶನ್ಗಂಗಾ ನದಿಪಾತ್ರದಲ್ಲಿರುವ ದುಧನಿಯಾಲ್ ಪ್ರದೇಶದ ಮೇಲೆ ಸೇನಾಪಡೆಗಳು ದಾಳಿ ನಡೆಸಿದ್ದವು. ಪರ್ವತದ ಮೇಲಿರುವ ಈ ಪ್ರದೇಶದ ಐವರು ಭಯೋತ್ಪಾದಕರನ್ನು ಏಪ್ರಿಲ್ 5ರಂದು ಸೇನೆಯ ವಿಶೇಷ ಪಡೆಗಳು ಹೊಡೆದುರುಳಿಸಿದ್ದವು. ಈ ಪೈಕಿ ಮೂವರು ಜಮ್ಮು ಕಾಶ್ಮೀರದವರಾಗಿದ್ದರೆ, ಇಬ್ಬರು ಜೈಶ್-ಎ- ಮೊಹಮ್ಮದ್ನಿಂದ ತರಬೇತಿ ಪಡೆದವರಾಗಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದರು.
ಭಾರತೀಯ ಸೇನೆ ದಾಳಿ ನಡೆಸಿದ್ದನ್ನು ಪಾಕ್ ಸೇನೆ ಕೂಡ ಖಚಿತಪಡಿಸಿದೆ. ಆದರೆ, 15 ವರ್ಷದ ಬಾಲಕಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಭಾರತ ಕೂಡ ಇದೇ ವರ್ಷ 708 ಬಾರಿ ಯುದ್ಧ ವಿರಾಮವನ್ನು ಉಲ್ಲಂಘಿಸಿದೆ ಎಂದು ಪಾಕ್ ಆರೋಪಿಸಿದೆ.
ಭಾರತದ ದಾಳಿಗೆ ಪಾಕ್ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಭಾರತದಷ್ಟೇ ಪ್ರಮಾಣದಲ್ಲಿ ಮದ್ದುಗುಂಡಗಳನ್ನು ಪ್ರತಿಯಾಗಿ ಪ್ರಯೋಗಿಸಿದೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ. ಭಾರತದ ದಾಳಿಯನ್ನು ಮರೆಮಾಚಲು ಈ ದಾಳಿ ನಡೆಸಿದೆ ಗುಪ್ರಚರ ಇಲಾಖೆ ಮೂಲಗಳು ತಿಳಿಸಿವೆ. ದಾಳಿ ವೇಳೆ ಕೆಲ ಅಂಗಡಿಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಗಡಿ ನಿಯಂತ್ರಣ ರೇಖೆ ಬಳಿ 160ಕ್ಕೂ ಅಧಿಕ ಭಯೋತ್ಪಾದಕರು ಭಾರತದ ಗಡಿಯತ್ತ ನುಸುಳಲು ಕಾದು ಕುಳಿತಿರುವುದರಿಂದ ಈ ದಾಳಿ ನಡೆಸುವುದು ಭಾರತಕ್ಕೆ ಅನಿವಾರ್ಯವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕರೊನಾ ಪಿಡುಗಿನಿಂದ ಆರ್ಥಿಕ ಹಿಂಜರಿತ; ಚೇತರಿಕೆಗೆ ಕೇಂದ್ರ ಸರ್ಕಾರ ಸುರಿಸುವುದೇ ಹೆಲಿಕಾಪ್ಟರ್ನಲ್ಲಿ ಹಣ…!?